ಹೀಗೊಂದು ಬಿಂದು ಹಾಲಿನ ಕಥೆ

ನನಗೆ ಸಣ್ಣ ಕಥೆಗಳು ಅತ್ಯಂತ ಪ್ರಿಯ. ಕೆಲವೇ ಕೆಲವು ಪದಗಳಲ್ಲಿ ತಾನು ಒಂದಷ್ಟು ಹೇಳಿ ಉಳಿದದ್ದನ್ನು ಓದುಗನ ಚಿಂತನೆಗೆ ಹಚ್ಚುವ ಸಣ್ಣ ಕಥೆಯ ಈ ಸಣ್ಣ ಗುಣ ನನ್ನ ಪಾಲಿಗೆ ಒಂದು ಸೆಳೆತ.
ಒಬ್ಬ ಯುವಕ. ಹೆಚ್ಚಿನ ಯುವಕರಿಗೆ ಒಂದು ವಯಸ್ಸಿನಲ್ಲಿರುವಂತೆ ಆತನಿಗೂ ಜೀವನದ ರಹಸ್ಯ ತಿಳಿಯುವ ಹಂಬಲ. ಈ ರಹಸ್ಯ ಭೇದಿಸಲು ಆತ ಸಿಕ್ಕ ಸಿಕ್ಕಲೆಲ್ಲ ಓಡಾಡಿದ್ದಾನೆ, ಕಂಡ ಕಂಡ ವೇದಾಂತಿಗಳ ಕಂಡಿದ್ದಾನೆ. ಇವನ ಪ್ರಶ್ನೆಗೆ ಎಲ್ಲರೂ ಅವರವರಿಗೆ ತೋಚಿದ ರಿತಿ ಉತ್ತರಿಸಿದ್ದಾರೆ. ಆದರೆ ಈತನಿಗೆ ಮಾತ್ರ ಆ ಎಲ್ಲಾ ಉತ್ತರಗಳಿಂದಲೂ ಪೂರ್ತಿ ಸಮಾಧಾನ ಎಂಬುದು ಸಿಕ್ಕಿರಲಿಲ್ಲ.
ಕೊನೆಯ ಪ್ರಯತ್ನವಾಗಿ ಒಮ್ಮೆ ಹಿಮಾಲದ ಎಡೆ ತನ್ನ ಪಯಣ ಬೆಳೆಸುತ್ತಾನೆ. ಅಲ್ಲಿ ಯಾರೋ ಒಬ್ಬ ಅದ್ಯಾತ್ಮಿಕ ಗುರು ಇದ್ದಾನೆ ಎಂಬ ಪುಟ್ಟ ಮಾಹಿತಿ ಇವನನ್ನು ಮೈಲಿಗಟ್ಟಲೆ ದೂರ ಕರೆದೊಯ್ದಿತ್ತು.
ಇವನಿಗೆ ಹಿಮಾಲಯ ಮೊದಲ ಭೇಟಿ. ಕೊರೆಯುವ ಚಳಿ ಅದಾಗಲೇ ಚರ್ಮದ ಮೇಲ್ಮೈಯನ್ನೆಲ್ಲಾ ಕೊರೆಯುವಷ್ಟು ಕೊರೆದಾಗಿತ್ತು. ಆದರೂ ಜೀವನ ರಹಸ್ಯ ತಿಳಿಯುವ ಕುತೂಹಲಕ್ಕೆ ಒಂದಿನಿತೂ ಕುಂದುಂಟಾಗಲಿಲ್ಲ. ಸಂಸ್ಕರಿಸಿದ ಆಹಾರ ಪೊಟ್ಟಣಗಳನ್ನು ಕಟ್ಟಿಕೊಂಡು ಬರೋಬ್ಬರಿ ನಾಲ್ಕು ದಿನ ನಡೆದ ಮೇಲೆ ಅವನಿಗೆ ಆ ಗುರು ಇರುವ ಸ್ಥಳ ಸಿಕ್ಕಿತು.
ಅದೊಂದು ಪುಟ್ಟ ಬಾಗಿಲು ಇರುವ ಗುಹೆ. ಅದರ ಒಳಗೆ ಹೊಕ್ಕರೆ ನೀರ ಬಿಂದು ಬಿದ್ದರೂ ಕೇಳಿಸುವಷ್ಟು ನಿಶ್ಯಬ್ದ. ಹೊರಗೆ ಬೀಸುತ್ತಿದ್ದ ಗಾಳಿಯ ಸದ್ದೂ ಅಲ್ಲಿಲ್ಲ. ಇನ್ನೆತ್ತ ಸಾಗುವುದು ಎಂದು ದಿಘ್ಮೂಢನಾಗಿದ್ದಾಗ ಅಲ್ಲಿಗೊಬ್ಬ ಗಡ್ಡಧಾರಿ ವ್ಯಕ್ತಿ ಬಂದು ನಗುಮೊಗದಿಂದ ವಿಚಾರಿಸಿದ. ಇವನಿಗೆ ಅಚ್ಚರಿಯಾದದ್ದು ಆ ವ್ಯಕ್ತಿಯ ಮಾತು ಕೇಳಿದಾಗ. ಮನೆಯಿಂದ ಹೊರಟು ಇಷ್ಟು ಮೈಲಿ ದೂರ ಬಂದ ಮೇಲೆ ಆತ ಮೊದಲ ಬಾರಿಗೆ ತನ್ನದೇ ಭಾಷೆಯಾಡುವ ಮತ್ತೊಬ್ಬ ವ್ಯಕ್ತಿಯನ್ನು ಕಾಣುತ್ತಿದ್ದಾನೆ. ಅಷ್ಟಕ್ಕೂ ಇವನಿಗೆ ತನ್ನ ಭಾಷೆ ಹೇಗೆ ತಿಳಿದಿದೆ, ತಾನು ಅದೇ ಭಾಷೆಯವ ಎಂದು ಅದ್ಹೇಗೆ ಈತ ಲೆಕ್ಕ ಹಾಕಿದ ಎನ್ನುವುದೇ ಈ ಯುವಕನ ಅರಿವಿಗೆ ಬರಲಿಲ್ಲ.
ತಾನು ಯೋಚಿಸುತ್ತಾ ನಿಂತಿದ್ದಾಗಲೇ ಆ ಆಸಾಮಿ ’ಜೀವನ ಬಹಳ ರಹಸ್ಯಮಯವಾಗೇನೂ ಇಲ್ಲ. ಅದನ್ನು ಸುಲಭದಲ್ಲಿ ತಿಳಿಯಬಹುದು. ಈಗ ಸಂಜೆಯಾಗಿದೆ. ಇಲ್ಲೇ ಪಕ್ಕದ ಕೋಣೆಯಲ್ಲಿ ಇವತ್ತು ಮಲಗು. ನಿನ್ನೆಲ್ಲಾ ಪ್ರಶ್ನೆಗಳನ್ನೂ ನಾಳೆ ಕೇಳುವಿಯಂತೆ’ ಎಂದು ಇವನಿಗೆ ಮಾತನಾಡಲೂ ಅವಕಾಶ ಕೊಡದೆ ಆತ ನಡೆದೇ ಬಿಟ್ಟ.
ಒಂದು ಕ್ಷಣಕ್ಕೆ ಯುವಕ ತಬ್ಬಿಬ್ಬಾದ. ತಾನು ಯಾವುದೋ ಮಾಯಾವಿ ಲೋಕಕ್ಕೆ ಬಂದಿದ್ದೇನೆ ಎಂದು ಅವನಿಗೆ ಭಾಸವಾಗಲು ಶುರುವಾಯಿತು. ಇಲ್ಲಿಯೇ ಇದ್ದರೆ ನಾಳೆ ಅಸಲಿಗೆ ತಾನು ಏಳುವುದೇ ಸಂಶಯ ಎಂದೆನಿಸಿತು. ಇದರ ಉಸಾಬರಿ ಬಿಟ್ಟು ಇಲ್ಲಿಂದ ಓಡಿ ಹೋಗೋಣವೇ ಎಂಬ ಆಲೋಚನೆ ಬಂತು. ಆದರೆ ಛೆ! ಓಡಿ ಹೋಗುವುದು ಮೂರ್ಖರ ಲಕ್ಷಣ, ನಾನು ಜೀವನ ರಹಸ್ಯ ತಿಳಿಯಲು ಬಂದ ಸಾಧಕ. ನನಗೆಂತಹ ಅಂಜಿಕೆ ಎಂದು ತನಗೆ ತಾನೇ ಧೈರ್ಯ ಹೇಳಿ ಚೀಲದಲ್ಲಿದ್ದ ಚಾಪೆ ಹಾಸಿ ಕಂಬಳಿ ಹೊದ್ದು ಮಲಗಿದ.
ಮರುದಿನ ಎಚ್ಚರವಾಗುವ ಹೊತ್ತಿಗೆ ನಿನ್ನೆ ಕಂಡ ವಿಸ್ಮಯಕಾರಿ ವ್ಯಕ್ತಿ ಅದೇ ಕೋಣೆಯ ಒಂದು ಮೂಲೆಯಲ್ಲಿ ಧ್ಯಾನ ಮಾಡುವ ರೀತಿ ಕುಳಿತಿದ್ದಾನೆ. ಇವನು ಎದ್ದು ಚಾಪೆ ಮಡಚುವ ಸದ್ದಿನಿಂದಲೋ ಎಂಬಂತೆ ಅವನು ಕಣ್ಣು ಬಿಟ್ಟ. ಕಣ್ಣು ಬಿಟ್ಟವನೇ ’ಹೊರಗೆ ಹೋಗು, ಪಕ್ಕದಲ್ಲೇ ಇನ್ನೋದು ಗುಹೆಯಂತಹ ಕೊಠಡಿಯಿದೆ. ಅಲ್ಲೇ ಬಿಸಿ ನೀರೂ ಇದೆ. ನಿತ್ಯ ಕರ್ಮ ಮುಗಿಸಿ ಇತ್ತ ಬಾ. ಹೇಗಿದ್ದರೂ ಮಾತನಾಡಲೆಂದೇ ನೀನು ಬಂದಿದ್ದೀಯ. ನಿನ್ನ ಮಾತನ್ನೆಲ್ಲಾ ಆಮೇಲೆ ಆಡಿದರಾಯಿತು’ ಎಂದ.
ಅಷ್ಟನ್ನು ಕೇಳಿದವನಿಗೆ ಮರುಮಾತನಾಡಲು ಧೈರ್ಯ ಬರಲಿಲ್ಲ. ಗಡ್ಡಧಾರಿಯ ಮಾತಿನಂತೆ ಸೀದಾ ಆಚೆ ಹೋಗಿ ಹದಿನೈದು ನಿಮಿಷದಲ್ಲಿ ಮತ್ತೆ ಬಂದ. ಬಂದು ಇನ್ನೇನು ಕೂರಬೇಕು, ಅಷ್ಟರಲ್ಲಿ ಆತ ಮತ್ತೆ ಮಾತು ಶುರುವುಟ್ಟುಕೊಂಡ.
’ಜೀವನದ ರಹಸ್ಯ ತಿಳಿಯಲು ನೀನಿಲ್ಲಿಗೆ ಬಂದಿದ್ದೀಯ. ನನಗೆ ತೋಚಿದ ಮಟ್ಟಿಗೆ ತಿಳಿಸುತ್ತೇನೆ. ಇಗೋ, ಈ ಚಮಚ ಹಿಡಿದುಕೊ. ಮೇಲೆ ಒಂದಿಷ್ಟು ಹಾಲು ಎರೆಯುತ್ತಿದ್ದೇನೆ. ಇದನ್ನು ಕೈಯಲ್ಲಿ ಹಿಡಿದು ಸಿದಾ ಹಿಂದೆ ಹೋಗು. ಅಲ್ಲೊಂದು ಪುಟ್ಟ ಬಾಗಿಲಿದೆ, ಅದನ್ನು ತೆರೆದು ಅಲ್ಲೇ ಹಿತ್ತಲಲ್ಲಿ ಏನೇನಿದೆಯೋ ಅದೆಲ್ಲವನ್ನೂ ಸವಿದು ಮತ್ತೆ ಬಾ. ಆದರೆ ಒಂದು ನೆನಪಿರಲಿ, ಈ ಚಮಚದಲ್ಲಿರುವ ಹಾಲು ಮಾತ್ರ ಒಂದಿನಿತೂ ಚೆಲ್ಲಬಾದರು’ ಎಂದು ಈತನ ಕೈಗೆ ಹಾಲು ತುಂಬಿದ ಚಮಚ ಕೊಟ್ಟ.
ಅವನ ಮಾತಿನಂತೆಯೇ ಯುವಕ ನಡೆದ. ಬಾಗಿಲು ತೆರೆದು ನೋಡುತ್ತಾನೆ, ಸ್ವರ್ಗವೇ ಧರೆಗಿಳಿದು ಬಂದಂಥ ಅನುಭವ. ತಾನು ಇದುವರೆಗೂ ಕಂಡು ಕೇಳರಿಯದ ಹೂವುಗಳು, ಇದುವರೆಗೆ ಕಲ್ಪಿಸಲು ಆಗದ ಸುಗಂಧ, ಹಿಮ, ಮಂಜು ಎಲ್ಲವೂ ಸೇರಿ ಅದರದ್ದೇ ಒಂದು ಸಂಗೀತ. ಆದರೆ ಅಷ್ಟರಲ್ಲಿ ಕೈಯಲ್ಲಿದ್ದ ಚಮಚ ನೆನಪಾಯಿತು. ಅದರಲ್ಲಿರುವ ಹಾಲು ಚೆಲ್ಲದಂತೆ ನಿಧಾನವಾಗಿ ಎಲ್ಲವನ್ನೂ ನೋಡುತ್ತಾ ಸಾಗಿ ಒಂದರ್ಧ ಗಂಟೆ ಬಳಿಕ ಪುನಃ ಆ ಗುಹೆಯಂತಹ ಜಾಗಕ್ಕೆ ಬಂದ.
ಬಂದ ಕೂಡಲೇ ಕೂರಲು ಹೇಳಿದ ಆ ಗಡ್ಡಧಾರಿ ಏನೇನು ಕಂಡೆ ಎಂದು ಪ್ರಶ್ನಿಸಿದ.
ಬಂದ ಮೇಲೆ ಆಡಲು ಸಿಕ್ಕ ಮೊದಲ ಮಾತಿನಿಂದ ಯುವಕ ವಿವರಿಸಿದ. ’ಜಿವನದಲ್ಲಿ ಎಂದೂ ಇಂತಹ ಜಾಗವೊಂದರ ಕಲ್ಪನೆಯೂ ಮಾಡಿರಲಿಲ್ಲ. ಆ ಹೂಗಳು, ಹಿಮ, ಮಂಜು ಆಹಾ..’
’ಸರಿ. ಬೇರೇನೆಲ್ಲ ನೋಡಿದೆ’
’ಬೇರೆ ಏನು? ಎಲ್ಲವನ್ನೂ ನೋಡಿದೆ’
’ಇರಲಿ ಹಾಗಾದರೆ. ಆ ಚಮಚ ತಾ, ಅದರಲ್ಲಿ ಹಾಲು ಹಾಗೆಯೇ ಇದೆಯೇ’
’ಇದೆ ಗುರುಗಳೆ, ಇಗೊಳ್ಳಿ’
ಗುರು. ತಾನು ಯಾಕೆ ಆತನ್ನು ಗುರು ಎಂದು ಕರೆದೆ ಎಂದು ಯುವಕನಿಕೆ ತತ್‌ಕ್ಷಣ ಅಚ್ಚರಿಯಾಯಿತು. ಅಷ್ಟರಲ್ಲೇ ಆ ಗುರು ಪುನಃ ಮಾತಿಗನುವಾದ.
’ಅಲ್ಲಿ ಆ ಮೂಲೆಯಲ್ಲಿ ಒಂದು ದೊಡ್ಡ ಮರವಿದೆ ನೋಡಿದೆಯೋ’
’ನೋಡಿದೆ ಗುರುಗಳೆ’
’ಅದರಲ್ಲಿ ಒಂದು ವಿಷೇಶ ಬಳ್ಳಿ ಇದೆ ಕಂಡೆಯೋ’
’ಬ.. ಬ.. ಬಳ್ಳಿ... ಇಲ್ಲ’
’ಸರಿ ಹಾಗಾದರೆ, ಈ ಚಳಿಯ ನಡುವೆಯೂ ಅಲ್ಲೊಂದು ಬಿಸಿ ನೀರ ಕೊಳ ಇರುವುದನ್ನು ನೋಡಿದೆಯಾ?’
’ಕೊಳಾ... ಇಲ್ಲವಲ್ಲ’
ಮುಂದೆ ಅದು ನೋಡಿದೆಯಾ, ಇದು ನೋಡಿದೆಯಾ ಎಂದು ಗುರು ಕೇಳುತ್ತಲೇ ಹೋದ. ಇವ ಇಲ್ಲವೆನ್ನುತ್ತಲೇ ಹೋದ.
’ಸರಿ ಹಾಗಾದರೆ, ಪುನಃ ಚಮಚಕ್ಕೆ ಹಾಲೆರೆದು ಕೊಡುತ್ತೇನೆ, ಈಗ ಮತ್ತೊಮ್ಮೆ ಹೋಗೆ ಆಗ ನೋಡದಿದ್ದುದ ಎಲ್ಲವನ್ನೂ ನೋಡು’ ಎಂದು ಮತ್ತೊಮ್ಮೆ ಕಳಿಸಿದ.
ಸುಮಾರು ಎರಡು ಗಂಟೆ ಕಳೆದ ಬಳಿಕ ವಾಪಾಸು ಬಂದ ಅವನ ಮುಖದ್ಲಿ ಮಹದಾನಂದ. ನೀವು ಹೇಳಿದ ಎಲ್ಲವನ್ನೂ ನೋಡಿದೆ ಗುರುಗಳೇ ಎನ್ನುತ್ತಲೇ ಓಡೋಡಿ ಬಂದ. ಆಗಿನಂತೆ ಗುರು ಸೌಮ್ಯ ಭಾವದಲ್ಲಿ ’ಒಳ್ಳೆಯದು’ ಎಂದು ಕೈಲಿದ್ದ ಚಮಚ ಕೇಳಿದ. ಆದರೆ ಈಗ ಯುವಕನಿಗೆ ಕಸಿವಿಸಿಯಾಯಿತು. ಕೈಲಿದ್ದ ಚಮಚ ಹಾಲು ಚೆಲ್ಲಿ ಬರಿದಾಗಿತ್ತು. ತಪ್ಪಿತಸ್ಥ ಭಾವದಲ್ಲಿ ಮುಖ ಕೆಳಗೆ ಹಾಕಿ ’ಓಹ್, ನೋಡುತ್ತಾ ನೋಡುತ್ತಾ ಮೈಮರೆತೆ. ಹಾಲು ಎಲ್ಲೋ ಚೆಲ್ಲಿರಬೇಕು. ತಾವು ಕ್ಷಮಿಸಬೇಕು’ ಎಂದು ಕೇಳಿಕೊಂಡ. ಆಗ ಗುರು ಹೇಳಿದ
’ಮಗೂ. ನೀನು ಮೊದಲು ಹೋದ ಜಾಗಕ್ಕೇ ಪುನಃ ಹೋದದ್ದು. ಮೊದಲು ಹೋದಾಗ ಅಲ್ಲಿ ಇಲ್ಲದ್ದು ಯಾವುದೂ ಎರಡನೇ ಬಾರಿ ಉದ್ಭವಿಸಲಿಲ್ಲ. ಆದರೆ ನಿನ್ನೆಲ್ಲ ಚಿತ್ತ ಕೈಲಿದ್ದ ಚಮಚದ ಮೇಲಿನ ಹಾಲಿನಲ್ಲಿತ್ತು. ಹಾಗಾಗಿ ಎಲ್ಲವನ್ನೂ ನೋಡಲು ನಿನಗೆ ಸಾಧ್ಯವಾಗಲಿಲ್ಲ. ಎರಡನೆಯ ಸಲ ಅಲ್ಲಿ ಇರುವುದೆಲ್ಲವನ್ನೂ ನೀನು ಸವಿದೆ. ಆದರೆ ಬಂದಾಗ ಚಮಚದಲ್ಲಿ ಹಾಲು ಉಳಿದಿರಲಿಲ್ಲ.
 ಜೀವನ ಅಂದರೆ ಹೀಗೇ. ಇಲ್ಲಿ ಹೂವು, ಹಣ್ಣು, ಬಣ್ಣ, ವಿಸ್ಮಯ, ಸುಖ ಎಲ್ಲವೂ ಇದೆ. ಒಡನೆ ಚಮಚದಲ್ಲಿ ಹಾಲಿದ್ದಂತೆ ನಾವೇ ನಿರ್ವಹಿಸಬೇಕಾದ ಕೆಲವು ಜವಾಬ್ದಾರಿಗಳೂ ಇವೆ. ಹಾಲೂ ಚೆಲ್ಲದೆ, ಎಲ್ಲವನ್ನೂ ಕಾಣುವುದೇ ಜೀವನ ರಹಸ್ಯ. ಬೇರೇನಿಲ್ಲ’ ಎಂದು ಗುರು ಕಣ್ಮುಚ್ಚಿ ಧ್ಯಾನಕ್ಕಿಳಿದ.
ಯುವಕನ ಕಣ್ಣಿನಲ್ಲಿ ಎಂದೂ ಕಾಣದ ಕಾಂತಿ ಹೊಳೆಯಿತು.