ವಿಸ್ಕಿ ಜೊತೆ ಸೋಡಾ ok, ಪೆಟ್ರೋಲ್ ಯಾಕೆ...?


ಕುಡಿದು ವಾಹನ ಓಡಿಸಬಾರದೆಂದಾದರೆ ಬಾರಿನೆದುರು ಪಾರ್ಕಿಂಗ್ ಜಾಗ ಏಕಿರುತ್ತದೆ ಎಂದು ಕಿಲಾಡಿ ಬೀರ್‌ಬಲ್ಲರು ಪ್ರಶ್ನಿಸಬಹುದು. ಬಿಡಿ, ಕುಡುಕರಿಗೆ ಸಬೂಬುಗಳಿಗೇನೂ ಕೊರತೆಯಿಲ್ಲ. ವಾಲಾಡುತ್ತಲಿದ್ದರೂ ಸ್ಪಷ್ಟೀಕರಣ ಮಾತ್ರ ನೇರವಾಗಿಯೇ ನೀಡುತ್ತಾರೆ.
ನಿಮ್ಮಂಥ ಕೆಲವು ಸಾತ್ವಿಕರು ಮಧ್ಯಪಾನ ಮಾಡಿ ವಾಹನ ಚಲಿಸಬೇಡಿ ಎಂದು ಬಸ್ಸಿನ ಹಿಂದೆ ಬರೆದಿರುವುದನ್ನು ನೋಡಿ, ಸರ್ಕಾರ ಮಧ್ಯಪಾನ ಮಾಡಿ ಎನ್ನುವುದನ್ನು ಒತ್ತಿ ಹೇಳುತ್ತಿದೆಯೋ ಅಥವಾ ವಾಹನ ಚಲಿಸಬೇಡಿ ಎನ್ನುವುದನ್ನು ಒತ್ತಿ ಹೇಳುತ್ತಿದೆಯೋ ಎಂದು ಕೆಲವೊಮ್ಮೆ ತಲೆ ಕೆರೆದುಕೊಂಡಿರಬಹುದು. ಆದರೆ ಪಾಪ ನಮ್ಮ ಸರ್ಕಾರ ಹೇಳಲು ಪ್ರಯತ್ನಿಸಿರುವುದು ಅವೆರಡನ್ನೂ ಮಿಕ್ಸ್ ಮಾಡಬೇಡಿ ಎಂದು.
ಅವರು ಹೇಳುವುದೂ ಸರಿಯೇ. ಏಕೆಂದರೆ ಈ ಎಣ್ಣೆ ಮಾಡುವ ಕರಾಮತ್ತು ಅಷ್ಟಿಷ್ಟಲ್ಲ. ಅದರಲ್ಲೂ ಇದು ಯುವ ದೇಹಗಳನ್ನು ಹೊಕ್ಕರೆ ಕೇಳುವುದೇ ಬೇಡ. ಮೊದಲೇ ಬಿಸಿಯಿರುವ ರಕ್ತ. ಮತ್ತಷ್ಟು ಬಿಸಿಯಾಗಿ ಶರವೇಗದಲ್ಲಿ ಎಲ್ಲಾ ಅಂಗಗಳಲ್ಲೂ ಸುಳಿದಾಡಿ, ಕೈ ಕಾಲೆಲ್ಲಾ ಸಡಿವಾಗಿ, ಇಡೀ ಮೈಗೆ ಮೈಕೆಲ್ ಜಾಕ್ಸನ್ ಎಫೆಕ್ಟ್ ಕೊಡುತ್ತದೆ.
ಈ ಎಫೆಕ್ಟ್ ಹೆಚ್ಚಾಗಿ ಒಂದಷ್ಟು ಸೈಡ್ ಎಫೆಕ್ಟ್‌ನಿಂದಾಗಿ ರೋಡ್‌ಸೈಡ್ ಹೋಗಿ ಬೀಳುವ ದಿನಚರಿ ಬೆಳೆಸಿಕೊಂಡವರು ಕೆಲವರಿರುತ್ತಾರೆ. ಅವರನ್ನೇನೋ ನಾವು full-time ಕುಡುಕರು ಎಂದು ಪಕ್ಕಕ್ಕಿಡಬಹುದು. ಆದರೆ ಇನ್ನೂ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ಈ ಕುಡಿಯುವ ಚಟ ಅದೇಕೋ..? ವಿದ್ಯಾರ್ಥಿ ದಿಸೆಯಲ್ಲಿ ಬಾರಿಗೆ ಹೋಗಿ ಕುಡಿದು ನೇರವಾಗಿ ಕಾಲೇಜಿಗೆ ಬಂದು ಡಿ-ಬಾರ್ ಆದವರ ಉದಾಹರಣೆ ಕಣ್ಮುಂದೆಯೇ ಇದ್ದರೂ ಇವರು ಪಾಠ ಕಲಿಯುವುದಿಲ್ಲವಲ್ಲ...
ಹೇಳಿ ಕೇಳಿ ಮನೆಯಲ್ಲಿವರು ಯುವರಾಜರು. ಇವರ ಬಯಕೆ ಈಡೇರಿಸುವ ಸಲುವಾಗಿ ಓದುವ ಹುಡುಗ, ಪಾಪ ಚೆನ್ನಾಗಿ ಓದಲಿ ಎಂದು ತಂದೆ ಮಹಾರಾಜರು ಬೈಕನ್ನು ದಯಪಾಲಿಸಿರುತ್ತಾರೆ. ಮತ್ತೆ ಕೇಳುವುದೇ ಬೇಡ. ಆಸೆ ಕುದುರೆ ಬೆನ್ನ ಏರಿದ ಇವರು ಮರೀಚಿಕೆ ಅರಸುತ್ತಾ ಓಡುತ್ತಾರೆ. ಆ ಮರೀಚಿಕೆ ಸ್ಪಷ್ಟವಾಗಿ ಕಾಣಲು ಪೆನ್ ಹಿಡಿಯುವ ಕೈಯ್ಯಾರೆ ಒಂದೆರಡು ಪೆಗ್ ಏರಿಸುತ್ತಾರೆ.
ಆದರೂ ಇವರನ್ನು ಹಾಗೆಲ್ಲಾ ವಿನಾಕಾರಣ ಕುಡಿಯುವವರು ಎಂದು ಸುಮ್ಸುಮ್ನೆ ದೂಷಿಸಬೇಡಿ. ಇವರಿಗೆ ಕುಡಿಯಲು ಹಲವು ಸಕಾರಣಗಳಿರುತ್ತವೆ. ಪರೀಕ್ಷೆ, ಅಸೈನ್ಮೆಂಟು ಇತ್ಯಾದಿ ಒತ್ತಡಗಳಿಂದ ಹೊರಬರುವ ಕಾರಣ ಕೆಲವರಿಗಾದರೆ, ಇನ್ನು ಕೆಲವರ ಮೇಲೆ ಹೆಣ್ಣೆಂಬ ಮಾಯೆಯ ಪ್ರಭಾವ. ಪ್ರೀತಿಸಿದ ಹುಡುಗಿ ಕೈಕೊಟ್ಟ ನೋವು ಮರೆಯಬೇಕಲ್ಲ?!
ಕುಡಿದು ಕುಡಿದು ದಣಿದ ಮನಸ್ಸಿಗೆ ಒಂದಷ್ಟು ಹೊತ್ತು ಗಾಳಿಯಲ್ಲಿ ಮೈಯೊಡ್ಡುವ ಮನಸ್ಸಾಗುತ್ತದೆ. ಹೇಗಿದ್ದರೂ ಬೈಕೆಂಬ ಬ್ರಹ್ಮರಾಕ್ಷಸ ಇರುತ್ತಾನಲ್ಲ. ಅವನ ಬೆನ್ನೇರಿ ಕಿವಿ ಹಿಂಡಿದರೆ ಸಾಕು, ಆಹಾ..! ಬದುಕು ಜಟಕಾ ಬಂಡಿಯಲ್ಲ, ಪುಷ್ಪಕ ವಿಮಾನ ಎಂದು ಅನಿಸಲು ಶುರುವಾಗುತ್ತದೆ. ಆದರೆ ಇವರಿಗೆ ಅದನ್ನೇರಿ ಸೋತ ರಾವಣನ ನೆನಪೇ ಆಗದಿರುವುದು ದುರಾದೃಷ್ಟ.
ಆ ರಾವಣನೂ ಹಾಗೇ. ಮನುಷ್ಯ ಒಳ್ಳೆಯವನೇ ಅಂತೆ. ಆದರೆ ಸೀತೆಗೆ ಕೈಚಾಚಿ ಗ್ರಹಚಾರ ಕೆಡಿಸಿಕೊಂಡ. ಅವನು ಅವನಷ್ಟಕ್ಕೇ ಇದ್ದಿದ್ದರೆ ಈ ಎಲ್ಲಾ ರಾಮಾಯಣವೇ ಇರುತ್ತಿರಲಿಲ್ಲ. ಆ ರಾವಣನಿಗೇನೋ ಶ್ರೀರಾಮನಿದ್ದ. ಆದರೆ ಗಾಂಧಿ ತಾತನ ಕನಸಾದ ನಮ್ಮ ರಾಮರಾಜ್ಯದಲ್ಲಿ ಅವನೇ ಇಲ್ಲವಲ್ಲ. ಏನ್ಮಾಡೋದು, ಕಲಿಕಾಲ!
ಆದರೆ ಕಲಿಗಾಲದ ಕುಡುಕರಿಗೆ ಒಂದು ವಿಚಾರ ಗೊತ್ತಿರಲಿ. ಕುಡಿದಾಗ ವ್ಯಕ್ತಿಯ ದೇಹ-ಮನಸ್ಸು ಪ್ರತಿಕ್ರಿಯೆ ನೀಡುವ ಸಮಯ ಗಣನೀಯವಾಗಿ ಇಳಿಯುತ್ತದೆ. ರಸ್ತೆಯಲ್ಲಿ ಒಂದು ನಾಯಿಮರಿ ಅಡ್ಡ ಬಂದರೂ ಸಾಕು, ಅದನ್ನು ನೋಡಿ ತಕ್ಷಣ ಬ್ರೇಕ್ ಹಾಕಬೇಕೆಂದು ಕೈ ಕಾಲಿಗೆ ಸಂದೇಶ ಕಳಿಸಲು ಮನಸ್ಸು ವೇಗವಾಗಿ ಓಡುವುದಿಲ್ಲ. ಕಣ್ಣುಗಳು ಸ್ಪಷ್ಟವಾಗಿ ನೋಡುವುದಿಲ್ಲ. ರಸ್ತೆಯ ತಿರುವೂ ನೇರವಾಗಿ ಕಂಡರೆ ಅಚ್ಚರಿಯಿಲ್ಲ.
ನಾವೆಲ್ಲ ಮನುಷ್ಯರು. ಸಮಾಜ ಜೀವಿಗಳು. ಕುಡಿದು ವಾಹನ ಓಡಿಸಿ ಯಾರ‍್ಯಾರಿಗೋ ಗುದ್ದಿ ಅವರ ಪ್ರಾಣಕ್ಕೂ ಸಂಚಕಾರ ತರುವುದು ಎಷ್ಟು ಸರಿ? ಜೀವ ತೆಗೆಯುವ ಹಕ್ಕು ನಮಗೆ ಇಲ್ಲ ಅಲ್ವ... ಏನಂತೀರಿ?





ಶಾಯಿ ಬರೆದ ಶಾಯರಿ...



ಬೆರಳೆಲ್ಲ ಓಲೆ ಗೀಚಿ ಮಸಿಯಾಗಿದೆ.. ಎಂಬ ಪದ್ಯದ ಸಾಲುಗಳನ್ನು ಕೇಳಿದ ಕೂಡಲೆ ಹೇಳಬಹುದು ಇದು ಜಯಂತ ಕಾಯ್ಕಿಣಿ ರಚನೆ ಎಂದು. ಸದ್ಯದ ಗೀತ ರಚನೆಕಾರರ ಪೈಕಿ ಕಾಯ್ಕಿಣಿಯವರಿಗೆ ಮಾತ್ರ ಇಂಥ ಕಲ್ಪನೆ ಮೂಡಲು ಸಾಧ್ಯ ಎಂದು ಅವರ ಅಭಿಮಾನಿಗಳು ಅಭಿಪ್ರಾಯ ಪಡುತ್ತಾರೆ. ಅವಲೋಕಿಸಿದಾಗ ನಿಮಗೂ ಹೌದೆನನಿಸಬಹುದು. ಯಾಕೆಂದರೆ ಓಲೆ ಗೀಚಿ ಗೀಚಿ ಬೆರಳೆಲ್ಲ ಮಸಿಯಾಗುವ ಅನುಭವ; ಅಂದರೆ ಇಂಕ್ ಪೆನ್ನನು ಬಳಸಿದ ಅನುಭವ ಇಂದಿನ ಯುವ ಕವಿಗಳಿಗೆ ಕಡಿಮೆ.
ಈ ಹಾಡನ್ನು ಕಾಯ್ಕಿಣಿ ಬಾಲ್ ಪೆನ್ನಿನಲ್ಲಿ ಬರಿದಿದ್ದಾಗಿರಲೂ ಬಹುದು. ಆದರೆ ಅವರಿಗೆ ಶಾಯಿ ಪೆನ್ನಿನಲಿ ಬರೆದ ಮಧುರಾತಿ ಮಧುರ ನೆನಪುಗಳು ಪೆನ್ನಿನೆಳಗಿನ ಇಂಕಿನಂತೆ ಹಸಿಯಾಗಿಯೇ ಇರುವುದು ಖಂಡಿತ. ಆ ಕಾಲಕ್ಕೆ ಬಾಲ್ ಪೆನ್ನುಗಳು ಅಷ್ಟಾಗಿ ಪ್ರಚಲಿತದಲ್ಲಿ ಇರಲಿಲ್ಲ.
ಹೀಗೊಂದು ಪ್ರಸ್ತಾಪ ಮಾಡಲು ಕಾರಣವಿಷ್ಟೆ. ನೀವೊಮ್ಮೆ ಈಗಿನ ಬರೆಯುವ ಮಕ್ಕಳ ಕೈಗಳನ್ನು ಹಾಗೇ ಸುಮ್ಮನೆ ಗಮನಿಸಿ, ಬೆರಳುಗಳಲ್ಲಿ ಇಂಕಿನ ಗುರುತುಗಳು ಹುಡುಕಿದರೂ ಸಿಗುವುದಿಲ್ಲ. ನೀವು ಕಲೆ ಹುಡುಕ್ತಾನೇ ಇರ‍್ತೀರ. ಹೌದು, ಇಂದಿನ ಮಕ್ಕಳ ಬಳಿ ಇಂಕ್ ಪೆನ್ನೇ ಇರುವುದಿಲ್ಲ. ಅವರ ಬರಹ ಮೂಡುವುದೇನಿದ್ದರೂ ಬಾಲ್ ಪೆನ್ನುಗಳಿಂದ. ಅವುಗಳಿಗೆ ಇಂಕ್ ತುಂಬಿಸುವ ಜಂಜಾಟವಿಲ್ಲ, ಕೆಲವಕ್ಕೆ ರೀಫಿಲ್ಲೂ ಹಾಕಬೇಕಾಗಿಲ್ಲ; ಬಳಸಿ ಬಿಸುಟಿದರಾಯಿತು.
ಪೆನ್ನುಗಳ ಕುರಿತ ಜಾಹೀರಾತುಗಳನ್ನೊಮ್ಮೆ ಸುಕ್ಷ್ಮವಾಗಿ ಗಮನಿಸಿ - ಸರ್ವಂ ಬಾಲ್ ಪೆನ್ನುಮಯಂ. ಅಪರೂಪಕ್ಕೊಮ್ಮೊಮ್ಮೆ ಕಾಣುವ ಪಾರ್ಕರ್ ಪೆನ್ನಿನ ಜಾಹೀರಾತಿನಲ್ಲಿ ಬಾಲ್ ಪೆನ್ನಿನ ಬಗಲಲ್ಲಿ ಇರಲಿ ಎಂದು ಒಂದು ಇಂಕ್ ಪೆನ್ನಿನ ಚಿತ್ರವೂ ಇರುವುದನ್ನು ಕಾಣಬಹುದಷ್ಟೆ.
ಪೆನ್ನಿನ ಇತಿಹಾಸವನ್ನು ಗಮನಿಸಿದರೆ ಬಾಲ್ ಪೆನ್ನಿನ ಅನ್ವೇಷಣೆಯಾದದ್ದು ಸೇನೆಯಲ್ಲಿ ಬಳಕೆಯ ಉದ್ದೇಶಕ್ಕಾಗಿ - ಭೂಪಟದ ಅಲ್ಲಲ್ಲಿ ಗುರುತು ಹಾಕಲು ಮತ್ತು ಕೆಲವು ಸಂಕ್ಷಿಪ್ತ ವಿವರ ಬರೆಯಲು. ಅಲ್ಲಿ ಯುದ್ಧ ಯೋಜನೆ ನಡೆಯುವ ಅಷ್ಟೂ ಹೆತ್ತು ಮುಚ್ಚಳ ಹಾಕದೆ ಇದ್ದರೂ ಒಣಗದ ತುದಿಯ ಅಗತ್ಯವಿದೆ ಮತ್ತು ಇಂಕಿನ ಸಾಗಾಟ-ಸಂಗ್ರಹವೂ ಕಷ್ಟ. ಸೇನೆಯಲ್ಲಿನ iಟಿsಣಚಿಟಿಣ ಅಗತ್ಯ ಹಾಗೂ ತುರ್ತು ಬಳಕೆ ಬಾಲ್ ಪೆನ್ನಿನ ಆವಿಷ್ಕಾರಕ್ಕೆ ಮುಖ್ಯ ಕಾರಣ.
ಆದರೆ ಇಂಥ ಗುಣಗಳಿಂದ ಬಾಲ್ ಪೆನ್ನು ಬಹು ಬೇಗ ಜನಸಾಮಾನ್ಯರ ಕೈ ಸೇರಿತು. ಇಂಕ್ ಪೆನ್ನಿನ ವಾಕರಿಕೆ ಬರುವ ಖಾಯಿಲೆ ಇದಕ್ಕಿಲ್ಲ. ಆಗಾಗ ತುಂಬಿಸಬೇಕೆನ್ನುವ ಖಯಾಲಿಯೂ ಇದಕ್ಕಿಲ್ಲ. ಬೆರಳು ಮತ್ತು ಅಂಗಿ ಶುಭ್ರ-ಸುಂದರ.
ಆದರೆ ಬಾಲ್ ಪೆನ್ನಿಗೊಂದು ಭಯಂಕರ ದುರ್ಗುಣವಿದೆ. ಅದು ಅಲ್ಪಾಯುಷಿ. ಬಳಸಿ ಬಿಸಾಡುವ ಕಾರಣದಿಂದ ಬರಹಗಾರನಿಗೆ ಪೆನ್ನಿನ ಮೇಲೊಂದು ಪ್ರೀತಿಯೇ ಬೆಳೆಯದಂತೆ ಮಾಡುತ್ತದೆ. ನೆನಪಿರಲಿ, ದೊಡ್ಡ ದೊಡ್ಡ ಗೆಲುವುಗಳಿಗಿಂತ, ಮಹತ್ ಸಾಧನೆಗಳಿಗಿಂತ ಹೆಚ್ಚಾಗಿ ಮಾನವನ ಮನಸ್ಸು ಸಂತೋಷ ಕಂಡುಕೊಳ್ಳುವುದು ಸಣ್ಣ-ಸಣ್ಣ ವಿಚಾರಗಳಲ್ಲಿ. ಒಂದು ಸುಂದರ ಮುಂಜಾನೆ; ಮಿಂಚಿ ಮರೆಯಾಗುವ ಅವಳದೊಂದು ಕಿರು ನಗೆ - ಇಂಥವೇ ಅಲ್ಲವೆ ನಮ್ಮನ್ನು ನಿರಂತರವಾಗಿ ಜೀವಂತಿಕೆಯಿಂದ ತುಂಬಿರುವಂತೆ ಪ್ರೇರೇಪಿಸುವುದು. ಸುಖ ಎಂದರದು ಪೆಕೇಟಿನಲ್ಲಿ ಸಿಗುವ ಸಿದ್ದ ಆಹಾರವಲ್ಲ, ಅದು ಗಂಗಾ ನದಿಯಂತೆ; ಅಲ್ಲಿ ಸದಾ ಹಿರಿವು ಇರಲೇಬೇಕು.
ಪೆನ್ನಿನ ಮೇಲೆ ಪ್ರೀತಿ ಹುಟ್ಟಿದಾಗ ಹಾಗೆಯೇ. ಪೆನ್ನಿನ ಮೇಲಣ ಪ್ರೀತಿಯೂ ಅವಳೆಡೆಗಿನ ಪ್ರೀತಿಯಷ್ಟೇ ಉತ್ಕಟ, ತಾಜಾ. ಅದಕ್ಕೆ ದಿನವೂ ಶಯಿ ತುಂಬಿಸುವುದು, ವರೆಸಿ ಅದನ್ನು ಫಳ ಫಳ ಹೊಳೆಯುವಂತೆ ಮಾಡುವುದು, ಅಪ್ಪಿ ತಪ್ಪಿ ಕೈ ಜಾರಿ ಬೀಳದಂತೆ ಎಚ್ಚರ ವಹಿಸುವುದು. ಹೌದು, ಪೆನ್ನೂ ಪ್ರೇಯಸಿಯಂತೆ.
ನಿಬ್ಬೇ ಆಭರಣ, ಮಚ್ಚಳವು ಕಿರೀಟ
ಬಳುಕುತ್ತ ಮೂಡುವ ಅಕ್ಷರಗಳು
ಅಳಿಸಲಾರದ ಹೆಜ್ಜೆ ಗುರುತುಗಳು.
ಬರಹದ ಅಂದದ ದೃಷ್ಟಿಯಿದ ನೋಡಿದಾಗಲೂ ಅಷ್ಟೆ. ಎಂದೂ ಇಂಕ್ ಪೆನ್ನಿನ ಬರಹವೇ ಸುಂದರ. ಒತ್ತಡವಿಲ್ಲದೆ ಮುಂದೆ ಮುಂದೋಡುವ ಇದರ ಸೊಬಗೇ ಸೊಬಗು. ಇದಲ್ಲದೆ ಕೈ ಬರಹಕ್ಕೂ ವ್ಯಕ್ತಿತ್ವಕ್ಕೂ ನೇರಾ ನೇರ ಸಂಬಂಧವಿದೆಯೆಂದು ಕೈಬರಹ ವಿಮರ್ಷಕರ ಅಭಿಪ್ರಾಯ. ಹೆಚ್ಚು ಒತ್ತಿ ಬರೆಯುವವರು ಸದಾ ಒತ್ತಡದಲ್ಲಿಯೇ ಬದುಕುತ್ತಿರುತ್ತಾರೆ. ಹಾಗಾಗಿಯೇ ಏನೋ ಈಗಿನವರು ಒತ್ತಡದಲ್ಲಿಯೇ ಜೀವಿಸುವುದು.
ನಿಮ್ಮ ಕೈಯಲ್ಲಿರುವ ಬಾಲ್ ಪೆನ್ನನ್ನು ಬದಿಗಿರಿಸಿ ಅಲ್ಲೊಮ್ಮೆ ಇಂಕ್ ಪೆನ್ನನ್ನಿಟ್ಟು ನೋಡಿ. ಸ್ವಲ್ಪವೇ ದಿನಗಳಲ್ಲಿ ಅದು ನಿಮಗೆ ಹಿಡಿಸಿಬಿಡುತ್ತದೆ. ಅದರೊಂದಿಗೊಂದು ಬಾಂಧವ್ಯವೂ ಏರ್ಪಡುತ್ತದೆ. ಮತ್ತು ಇಂಕ್ ಪೆನ್ನು ಮರು ಬಳಕೆ ಮಾಡಬಹುದಾದ್ದರಿಂದ, ಪ್ಲಾಸ್ಟಿಕ್ ಬಳಕೆ ಕಡಿಮೆ ಇರುವುದರಿಂದ ಅದು ಪರಿಸರ ಸ್ನೇಹಿಯೂ ಹೌದು.