Silly poem

Bangalored


ದಿನಾಂಕ ೧೬-೧೧-೨೦೧೦ ರ ವಿಜಯ ಕರ್ನಾಟಕದ ಲವಲವಿಕೆಯಲ್ಲಿ (ಲಗತ್ತಿಸಿದ ಪ್ರತಿ ನೋಡಿ) ಕಾರ್ತಿಕ ಪರಾಡ್ಕರ್ ಬರೆದ 'ಬೆಂಗಳೂರೆಂದರೆ..' ಕೊಂಚ ಕಾಡಿತು. ಬೆಂಗಳೂರೆಂದರೆ ಪೂರ್ಣವಿರಾಮವಿಲ್ಲದ, ವಾಕ್ಯವಾಗಲು ಒದ್ದಾಡುವ, ಕಾಮಾಗಳಿಂದಲೇ ತುಂಬುತ್ತಾ ಹೋಗುವ ಚಿತ್ರ ಪಟ... ಬಣ್ಣ ಬಣ್ಣದ ಗಾಳಿಪಟ... ಎಂದಿದ್ದಾರೆ ಲೇಖಕ.
ಗಮ್ಮತ್ತಿನ ವಿಚಾರವೆಂದರೆ ಇಡೀ ಬರಹದಲ್ಲಿ ಒತ್ತೇ ಒಂದು ಪೂರ್ಣವಿರಾಮ ಸುಳಿಯುವುದೇ ಇಲ್ಲ. ಅದು ಬರುವುದು ಕೊನೆಯ ಒಂದು ಸಾಲಿನ ಕೊನೆಯಲ್ಲಿ ಮಾತ್ರ. ಅಲ್ಲಿಗೆ ಬರಹ ಸಮಾಪ್ತಿಗೊಳ್ಳುತ್ತದೆ. ಬರಹದ ತುಂಬಾ ವಾಕ್ಯವಾಗಲು ಒದ್ದಾಡುವ, ಕೇವಲ ಕಾಮಾಗಳಿಂದಷ್ಟೇ ಕೊನೆಗೊಳ್ಳುವ ಸಾಲುಗಳು. ಪ್ರತಿ ಸಾಲೂ ಬದುಕಲು ಒದ್ದಾಡುವುದು ಕಾಣುತ್ತದೆ.
ಓದಿದಾಗ ನನಗೆ ಥಟ್ಟನೆ ನೆನಪಾದದ್ದು ೨೦ನೇ ಶತಮಾನದ ಇಂಗ್ಲೀಷ್ ಕವಿ ಯೇಟ್ಸ್. ಈತ ಬರೆಯುತ್ತದ್ದ ನವ್ಯ ಪದ್ಯಗಳು ಒಂದು ರೀತಿ ಹಾಗೆಯೇ. ಇಡೀ ಕವಿತೆಯ ಒಂದು ಪೂರ್ಣ ಮೊತ್ತದ ಅರ್ಥ ಹೊತ್ತು ಆ ಕವಿತೆಯ ರೂಪವೂ ಹೊರಬರುತ್ತಿತ್ತು. ಐರ್ಲೆಂಡಿನಲ್ಲಿ ಬ್ರಿಟಿಷ್ ಆಡಳಿತದ ವಿರುದ್ಧ ೧೯೧೬ರ ಏಪ್ರಿಲ್ ೨೪ರಂದು ಎದ್ದ ದಂಗೆಯ (ಅಥವಾ ಹೋರಾಟ ಅನ್ನಿ) ಕುರಿತು ಬರೆದ ಪದ್ಯ ಈಸ್ಟರ್ ೧೯೧೬ನ ಪ್ಯಾರಾಗಳಲ್ಲಿ ಒಂದರಲ್ಲಿ ೧೬ ಸಾಲಿದ್ದರೆ ಮತ್ತೊಂದರಲ್ಲಿ ೨೪.
ಹಾಗೆ ನೋಡಿದರೆ ಆ ಕಾಲದ ಹೆಚ್ಚಿನ ಇಂಗ್ಲೀಷ್ ಕವಿಗಳು ಇಂತಹ ಒಂದು ಕರಾಮತ್ತನ್ನು ಪದ್ಯಗಲಲ್ಲಿ ತುಂಬಲು ತವಕಿಸುತ್ತಿದ್ದರು. ಇಂಗ್ಲೀಷ್‌ನ ನವ್ಯ ಯುಗದ ಹರಿಕಾರ ಈಲಿಯಟ್‌ನ The Love Song of J Alfred Prufrock ಕೂಡ ಹೀಗೆಯೇ. ಅದರ ನಾಯಕನ ಸ್ಥಿಮಿತ ರಹಿತ ಧೋರಣೆಗಳನ್ನು ಅತಂತ್ರ ಸಾಲುಗಳೂ ಹೇಳುತ್ತವೆ.
ಈಲಿಯೆಟ್‌ನ ವೇಸ್ಟ್ ಲ್ಯಾಂಡಂತೂ ಇಂತಹ ಅದೆಷ್ಟು ಒಳಗುಟ್ಟು ಹೊಂದಿದೆ ಎಂದು ಬಹುಶಃ ಆತನಿಗೂ ಗೊತ್ತಿರಲಿಕ್ಕಿಲ್ಲ. ಸರಿ ಸುಮಾರು ೨೦ ಪುಟಗಳಷ್ಟಿರುವ ಆ ಪದ್ಯದ ಕೊನೆಯ ಸಾಲಿಗೆ ಮುಟ್ಟುತ್ತಿದ್ದಂತೆ ಮೊದಲಿನ ಸಾಲು ಏನು ಓದಿದ್ದೆ ಎಂದು ಮರೆತೇ ಹೋಗುತ್ತದೆ. ಆದರೆ ಕೊನೆಯ ಎರಡು ಸಾಲುಗಳು ದಾ, ದಯಾದ್ವಂ, ದಮ್ಯತಾಃ/ ಶಾಂತಿಃ ಶಾಂತಿಃ ಶಾಂತಿಃ ಎಂದು ಕೊನೆಗೊಳ್ಳುತ್ತದೆ. ಭಾರತೀಯ ತತ್ವಶಾಸ್ತ್ರದ ಕಡೆಗೆ ಆ ಕವಿ ಇಟ್ಟುಕೊಂಡಿದ್ದಂಥ ಒಂದು ಬಗೆಯ ಸೆಳೆತಕ್ಕೆ ಸಾಕ್ಷಿ ಒದಗಿಸಿದಂತೆ ಭಾರತೀಯ ಮನಸ್ಸುಗಳಿಗೆ ಅನಿಸುತ್ತದೆ.
ಆದರೆ ಅವರೆಲ್ಲರ ನವ್ಯ ಪದಗಳಲ್ಲಿ ಅರ್ಥ, ಮತ್ತು ಆ ಅರ್ಥಕ್ಕೆ ಹೋಲುವ ಒಂದು ರೂಪ ಕಾಣಬಹುದು; ಕಾರ್ತಿಕರ ಲೇಖನದಲ್ಲಿ ವ್ಯಕ್ತವಾದಂತೆ. ಇಲ್ಲಿ ಶೈಲಿ ಮಾತ್ರವಲ್ಲದೆ ರೂಪವೂ ಅರ್ಥಕ್ಕೆ ತಕ್ಕಂತೆ ಬಂದಿದೆ.
ಹಾಗಾದರೆ ಇಂದು ನಮ್ಮ ಪಾಲಿಗೆ ಬೆಂಗಳೂರೂ ವಾಕ್ಯವಾಗಲು ಹೆಣಗಾಡುವ ಸಾಲುಗಳ ಹಾಗೆ ಆಗಿದೆಯಾ. ಇದ್ದರೂ ಇರಬಹುದು. ಆದರೆ ನೋಡುವ ಕಣ್ಣು ಬದಲಾದರೆ ಅದೂ ಬದಲಾಗಬಹುದು.
ಹೆಚ್ಚು ಬೇಡ. ಸುಳ್ಯ ಸಮೀಪದ ಒಂದು ರಕ್ಷಿತಾರಣ್ಯದ ಬದಿಗಿರುವ ನಮ್ಮ ಹಳೇ ಮನೆಯಲ್ಲಿ ಧೋ ಎಂದು ಮಳೆ ಸುರಿವಾಗ ಮನೆಯಲ್ಲಿನ ಪ್ರತಿಯೊಬ್ಬರದ್ದೂ ಒಂದೊಂದು ದೃಷ್ಟಿ. ಹಂಚುಗಳೆಡೆಯಿಂದ ಸೋರುವ ನೀರಿಗೆ ಗತಿ ಕಾಣಿಸಲು ಚಿಕ್ಕಮ್ಮ ಅಲ್ಲಲ್ಲಿ ಪಾತ್ರೆ-ಬಕೇಟು ಇಡಲು ಅಣಿಯಾಗುತ್ತಾರೆ, ಚಿಕ್ಕಪ್ಪ ಒಮ್ಮೆ ದೀರ್ಘ ಉಸಿರೆಳೆದು ತೋಟದೆಡೆ ಕಣ್ಣು ಹಾಯಿಸುತ್ತಾರೆ, ಹೈಸ್ಕೂಲು ಹುಡುಗ ತಮ್ಮನು ಟಿವಿ ಪ್ಲಗ್ಗು ತೆಗೆದು ಇನ್ನೇನು ಎಂಬ ಶೂನ್ಯ ಭಾವದಲ್ಲಿ, ಅಣ್ಣನ ಮಗನಾದ ಪ್ರೈಮರಿ ಹುಡುಗ ಹಳೇ ಒಏಪರಿನ ರಾಶಿಯಲ್ಲಿ ಕೂತು ಕಾಗದದ ದೋಣಿ ಮಾಡುವ ತರಾತುರಿಯಲ್ಲಿ, ಹಿಂದೆ ಅಜ್ಜಿ ಇದ್ದಾಗ ಮಕ್ಕಳೇ ಜಾರಬೇಡಿ ಎಂದು ಎಚ್ಚರಿಕೆ ಕೊಡುವ ಎಚ್ಚರದಲ್ಲಿರುತ್ತಿದ್ದರು. ಹೀಗೆ ಹಳ್ಳಿ ಬದುಕೂ ಏಕಾಂತ-ಧಾವಂತಗಳ ನಡುವೆ ಸಾಗುತ್ತದೆ ಅಲ್ಲವಾ.
ಆದರೆ ಅವೆಲ್ಲವೂ ಸಾಹಿತ್ಯದಲ್ಲಿ ದಾಖಲಾಗುವ ಪರಿಯೇ ವಿಸ್ಮಯ. ಸಾಹಿತ್ಯವೆಂದರೆ ಮಳೆಗಾಲದಲ್ಲಿ ನನ್ನ ಅಣ್ಣನ ಮಗ ಆಕಾಶ ಬಿಡುವ ದೋಣಿಯಂತೆ. ಸರಾಗವಾಗಿ ತೇಲಿ ತೇಲಿ ಸಾಗಲು ಪ್ರಯತ್ನಿಸುತ್ತಿರುತ್ತದೆ. ಆದರೆ ನಡುವೆ ಕೆಲವೊಮ್ಮೆ ಕಲ್ಲು-ಮುಳ್ಳು ಕಸ-ಕಡ್ಡಿ ಸಿಕ್ಕರೆ ಅಲ್ಲಿಯೇ ಉಳಿದು ಕೊನೆಗೆ ಅಲ್ಲಿಯೇ ಮಕಾಡೆ ಮಲಗುತ್ತದೆ.
ಹಾಗೆ ಕಾಗದದ ದೋಣಿಯಂತೆ ಸಾಗುವ ಸಾಹಿತ್ಯ ಕೆಲವೊಮ್ಮೆ ವಿಮರ್ಶಕರ ಕೈಗೆ ಸಿಕ್ಕು ಅಲ್ಲಿಯೇ ಅಸ್ಥಿರಗೊಳ್ಳುವುದೂ ಉಂಟು. ಹಾಗಾದರೆ ಸಾಹಿತ್ಯಕ್ಕೆ ಬ್ರ್ಯಾಂಡೆಡ್ ವಿಮರ್ಶಕರಿಂದ ಮುಕ್ತಿಯೇ ಇಲ್ಲವೇ? ಉಂಟೇನೋ... ನೀರಿನ ಓಘ ಹೆಚ್ಚಾದರೆ ಕಲ್ಲಿಗೆ ಸಿಕ್ಕ ದೋಣಿ ಅಲ್ಲಿಂದ ಕದಲುತ್ತದೆ. ಸಾಹಿತ್ಯದ ವಿಚಾರದಲ್ಲಿ ಈ ನೀರೇ ಓದುಗ. ಓದುಗರು ಹೆಚ್ಚಾದಂತೆ ಸಾಹಿತ್ಯವೂ ಸ್ವತಂತ್ರವಾಗುತ್ತದೆ. ಕೃತಕ ಭಾವದ ಎಲ್ಲೆ ಮೀರಿ ಸಾಗುತ್ತದೆ.
ಅದು ಹೇಗೇ ಇರಲಿ, ನನಗ್ಯಾಕೆ? ಹೇಳೀ ಹೇಲಿ ಕಡೆಗೆ ನಾನೂ ಒಬ್ಬ 'ಒಳ್ಳೆಯ' ವಿಮರ್ಶಕನೆಂದು ಬ್ರ್ಯಾಂಡ್ ಆಗಬೇಕೇ...
ಬ್ರ್ಯಾಂಡ್ ಆಗುವುದು ಬೇಡವೇನೋ ಸರಿ. ಆದರೆ ಪ್ರತೀ ಮನುಷ್ಯ ತನ್ನೊಳಗೇ ಒಬ್ಬ ವಿಮರ್ಶಕನನ್ನು ಇಟ್ಟುಕೊಳ್ಳದಿದ್ದರೆ ಹೇಗೆ? ಕನಿಷ್ಟ ತನ್ನ ಒಳಗಿನ ಒಳಗಿನವನನ್ನು ವಿಮರ್ಶೆ ಮಾಡಲಾದರೂ ಒಬ್ಬ ಒಳಗಿನ ವಿಮರ್ಶಕ ಬೇಡವೇ? ಆದರೆ ಈ ವಿಮರ್ಶಕ ನಮ್ಮೊಳಗಿನವನೇ ಆಗಿದ್ದರೆ ಅವನಿಂದ ಸರಿಯಾದ ವಿಮರ್ಶೆ ನಿರೀಕ್ಷಿಸಲು ಸಾಧ್ಯವಾ ಎಂಬುವುದು ಪ್ರಶ್ನೆ. ಬೇಡ, ವಿಮರ್ಶೆಗಿಳಿಯುವುದು ಬೇಡ.
ಇಷ್ಟಾದರೂ ಮತ್ತೊಮ್ಮೆ ನನ್ನ ಮನಸ್ಸು ಎಳೆಯುವುದು ಮತ್ತೆ ಸಾಹಿತ್ಯದ ಕಡೆ. ಸರಿ, ಬದುಕು ಬದಲಾದಂತೆ ಸಾಹಿತ್ಯವೂ, ಅದರ ರೂಪ ಸ್ವರೂಪವೂ ಬದಲಾಗುತ್ತದೆ. ಹಾಗಾದರೆ ಪಂಪ, ರನ್ನ, ಪೊನ್ನ, ಜನ್ನರಾದಿಯಾಗಿ ನಮ್ಮ ಸಾಲು ಸಾಲು ಕವಿಗಳು ಶತ ಶತಮಾನ ಬರೆದರಲ್ಲ ಅದರೆಲ್ಲಿ ಸೋಜಿಗವೇನು ಗೊತ್ತೆ. ಹುಡುಕಿದರೂ ಫುಲ್‌ಸ್ಟಾಪು, ಕಾಮಾಗಳು ಇಲ್ಲದಿರುವುದು. ಬಹುಶಃ ಆಗಿನ ಕಾಲಕ್ಕೆ ಅವುಗಳ ಆವಿಷ್ಕಾರವೂ ಆಗಿರಲಿಲ್ಲ. ಮತ್ತು ಬಹುಶಃ ಆಗ ಅವುಗಳ ಅಗತ್ಯವೂ ಇರಲಿಲ್ಲ. ಆದರೆ ಅವರ ಇಡೀ ಸಾಹಿತ್ಯಕ್ಕೆ ಒಂದು ನಿರ್ದಿಷ್ಟ ಸೂತ್ರವಿದೆ, ಭಾವವಿದೆ, ರಸವಿದೆ, ರೀತಿಯಿದೆ, ನೀತಿಯಿದೆ. ಅವರ ಪದ್ಯಗಳ ಎಳೆ ಛಂದಸ್ಸು.
ಫುಲ್‌ಸ್ಟಾಪು ಕಾಮಾಗಳ ಹಂಗು ಬಿಟ್ಟು ಅಂಥಾದ್ದೊಂದು ಛಂದಸ್ಸು ಬದುಕಿನ ಪ್ರತಿರೂಪವಾದರೆ, ಅಚಿಂತ್ಯ ಶಕ್ತಿಯಾಗಿ ಅದು ದಾರಿ ನಡೆಸಿದರೆ ಅದೆಷ್ಟು ಚೆನ್ನ...

ಚೀನೀ ಹೆಣ್ಣ ಚೆಲುವಿನ ಕಣ್ಣ

ಮೊಬೈಲ್ ಫೋನುಗಳಿಗೆ IMEI (International Mobile Equipment Identity) ಸಂಖ್ಯೆ ಎಂಬುದೊಂದು ಇರುತ್ತದೆ ಎಂದು ಹೆಚ್ಚಿನ ಭಾರತೀಯರಿಗೆ ತಿಳಿದದ್ದು ಕಳೆದ ವರ್ಷವಷ್ಟೆ.
ದೇಶಕ್ಕೆ ಮೊಬೈಲ್ ಸೇವೆ ಕಾಲಿಟ್ಟು ಸುಮಾರು ಹತ್ತು ವರ್ಷಗಳಾಗುವ ಹೊತ್ತಿಗೆ ಧುತ್ತೆಂದು ಅಗ್ಗದ ಚೈನಾ ಮೊಬೈಲ್‌ಗಳು ಕಾಲಿಟ್ಟವು. ಅಷ್ಟಾಗುವ ಹೊತ್ತಿಗೆ ಕರೆ ದರಗಳೂ ಬಹಳಷ್ಟು ಇಳಿದಿದ್ದರಿಂದ ಮೊಬೈಲ್ ಹೊಂದುವುದು ಐಶಾರಾಮಿ ಎಂಬ ಭಾವನೆ ಹೋಗಿ ಅಗತ್ಯ ಎಂಬಲ್ಲಿಗೆ ಬಂದಿತ್ತು. ಆದರೆ ಅಪ್ಪ ಇಲ್ಲದ ಕಂಪೆನಿಗಳ ಈ ಚೈನಾ ಮೊಬೈಲ್‌ಗಳಿಗೆ ಐಎಂಇಐ ಸಂಖ್ಯೆಯೇ ಇರುತ್ತಿರಲಿಲ್ಲ. ಇದು ದೇಶದ ಭದ್ರತೆ ದೃಷ್ಟಿಯಿಂದ ಮೊಬೈಲನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಕು ಉಂಟುಮಾಡುತ್ತದೆ ಎಂಬ ಕಾರಣದಿಂದ ಸರಕಾರ ಐಎಂಇಐ ಸಂಖ್ಯೆ ಇಲ್ಲದ ಫೋನುಗಳನ್ನು ಕಳೆದ ಡಿಸೆಂಬರ್‌ನಿಂದ ನಿಷೇಧಿಸಿದ್ದು ನಿಮಗೆಲ್ಲ ಗೊತ್ತೇ ಇದೆ. ಇದಾದ ನಂತರ ಚೈನಾ ಮೊಬೈಲ್‌ನಲ್ಲಿ ಎಲ್ಲೋ ಮಳೆಯಾಗಿದೆಯೆಂದು ಹಾಡು ಕೇಳುತ್ತಿದ್ದವರ ನೋಡಿ ನೀವೂ ನಕ್ಕಿರುತ್ತೀರಿ.

ಹೊಸ ದೇಸೀ ಕಂಪೆನಿಗಳು:
ಇಷ್ಟಾಗುವ ಹೊತ್ತಿಗೆ ಜನರಿಗೆ ಚೈನಾ ಮೊಬೈಲ್‌ಗಳ ಮೇಲಿದ್ದ ವ್ಯಾಮೋಹ ಕಡಿಮೆಯಾಗಿ ಅವುಗಳ ಮಾರಾಟದಲ್ಲಿ ತೀವ್ರ ಇಳಿಮುಖವಾಗಲು ಆರಂಭವಾಯಿತು. ಸುಮರು ೩.೫ ಕೋಟಿ ಮೊಬೈಲ್ ಗ್ರಾಹಕರಿರುವ ನಮ್ಮ ದೇಶದಲ್ಲಿ ಈ ಸಂದರ್ಭ ಬಳಸಿಕೊಂಡು ಕೆಲವು ಹೊಸ ಮೊಬೈಲ್ ಕಂಪೆನಿಗಳು ಹುಟ್ಟಿಕೊಂಡವು. ಮೈಕ್ರೋಮ್ಯಾಕ್ಸ್, ಲೆಮೆನ್, ಕಾರ್ಬನ್ ಅಲ್ಲದೆ ಒನಿಡ, ಆಲಿವ್ ವೀಡಿಯೋಕಾನ್‌ನಂಥ ಇತರೆ ಎಲೆಕ್ಟ್ರಾನಿಕ್ ಕಂಪೆನಿಗಳೂ ಮೊಬೈಲ್ ಮಾರಾಟ ಮಾಡಲು ಅಣಿಯಾದವು.
ಈ ಎಲ್ಲಾ ಕಂಪೆನಿಗಳು ಆರಂಭದಲ್ಲಿ ಮಾಡಿದ್ದು ಇಷ್ಟೆ. ಚೀನಾದಲ್ಲಿ ಗುಡಿಕೈಗಾರಿಕೆ ರೂಪದಲ್ಲಿ ತಯಾರಾಗುವ ಪೋನುಗಳನ್ನು ಇಲ್ಲಿಗೆ ತರಿಸಿ ತಮ್ಮದೇ ಹೆಸರು; ಅಂದರೆ ಬ್ರ್ಯಾಂಡ್‌ನಡಿಯಲ್ಲಿ ಮಾರಾಟ ಮಾಡಿದ್ದು. ಚೀನಾದಲ್ಲಿ ಇವುಗಳ ತಯಾರಿ ಯಾವ ಮಟ್ಟಕ್ಕೆ ಇದೆ ಎಂದರೆ ಒಂದೊಂದು ಕಂಪೆನಿಯೂ ವಾರಕ್ಕೆ ಸುಮಾರು ಹತ್ತು ಸಾವಿರ ಮೊಬೈಲುಗಳನ್ನು ಮಾರಾಟ ಮಾಡಿ ಬಸಾಕುತ್ತದೆ.
ಆದರೆ ಚೀನಾದಿಂದ ಆಮದು ಮಾಡುವ ಮೊಬೈಲ್‌ಗಳ ಜವಾಬ್ದಾರಿ ಸಂಪೂರ್ಣವಾಗಿ ಇಲ್ಲಿಗೆ ಆಮದು ಮಾಡಿಕೊಳ್ಳುವ ಕಂಪೆನಿಗಳ ಹೆಗಲ ಮೇಲೆ ಬೀಳುತ್ತದೆ. ಅವುಗಳಿಗೆ ನೀಡುವ ಐಎಂಇಐ ಸಂಖ್ಯೆ, ವಾರೆಂಟಿ, ಮಾರುಕಟ್ಟೆ ಜಾಲ ಇವೆಲ್ಲವುಗಳ ಜವಾಬ್ದಾರಿ ಹೊರುವುದು ಇಲ್ಲಿ ಪೋನುಗಳನ್ನು ದತ್ತು ತೆಗೆದುಕೊಳ್ಳುವ ಕಂಪೆನಿಗಳು.
ಆರಂಭದಲ್ಲಿ ಹೀಗೆ ವ್ಯಾಪಾರ ಶುರು ಮಾಡಿದ ಕೆಲವು ದೇಸೀ ಕಂಪೆನಿಗಳು ಮುಳುಗಿ ಹೋದವು, ಜತೆಯಲ್ಲಿ ಅಂತಹ ಮೊಬೈಲ್ ಕೊಂಡವರೂ ಮುಳುಗಿದರು. ಆದರೆ ಇಂಥವಕ್ಕೆ ಸಿದ್ಧವಿದ್ದೇ ಅಗ್ಗದ ಮೊಬೈಲ್ ಕೊಂಡ ಜನತೆ ಪೂರ್ಣ ಮುಳುಗುವುದಕ್ಕು ಮೊದಲು ಬರೇ ಕೈ-ಕಾಲು ಒದ್ದೆ ಮಾಡಿಕೊಂಡು ಬಂದರು.
 
ತಂತ್ರಜ್ಞಾನ:
ಹೀಗೆ ಆಮದಾಗುವ, ಬೇರೆ ಬೇರೆ ಮಾಡೆಲ್, ಹೆಸರುಗಳ ಹಣೆಪಟ್ಟಿ ಹೊತ್ತು ಬರುವ ಬಹುತೇಕ ಮೊಬೈಲ್‌ಗಳು ಹೆಚ್ಚೂ ಕಮ್ಮಿ ಒಂದೇ ಸಮನೆ ಇರುತ್ತವೆ. ಆಕಾರ, ಬಣ್ಣಗಳಲ್ಲಿ ತುಸು ವ್ಯತ್ಯಾಸ ಇರಬಹುದಷ್ಟೆ. ಕಾರಣ, ಇವೆಲ್ಲವೂ ಒಂದೇ OS ಅಂದರೆ Operating System ನಲ್ಲಿ ಕಾರ್ಯನಿರ್ವಹಿಸುವವು. ಅದು ನ್ಯೂಕ್ಲಿಯಸ್ ರಿಯಲ್ ಟೈಮ್ ಆಪರೇಟಿಂಗ್ ಸಿಸ್ಟೆಮ್ (Nucleus Real Time Operating System).
RTOS ನ ಮೂಲ ಕರ್ತೃ ಆಕ್ಸಲರೇಟೆಡ್ ಟೆಕ್ನಾಲಜಿ. ಮತ್ತು ಇದು ಉಪಯೋಗಿಸುವುದು MK sreies ನ ಚಿಪ್. ಈ ತಂತ್ರಜ್ಞಾನ ಬರೀ ಮೊಬೈಲ್‌ಗಳಿಗಷ್ಟೇ ಅಲ್ಲ. ಚೀನಾದಿಂದ ಆಮದಾಗುವ ಎಂಪಿ೩ ಪ್ಲೇಯರ್, ದಿಶ್ ಟಿವಿ, ಬಿಗ್ ಟಿವಿಯವರ ಸೆಟ್ ಟಾಪ್ ಬಾಕ್ಸ್‌ಗಳು ಎಲ್ಲವುಗಳ ಮೂಲ ತಂತ್ರಜ್ಞಾನ ಇದೇ.
RTOSನ ಒಂದು ಅನುಕೂಲವೆಂದರೆ ಇದು ತಿರಾ ಸರಳ ಕಾರ್ಯಭಾರ ಹೊಂದಿದೆ. ಇದರಲ್ಲಿ ಫೋನುಗಳಿಗೆ ಬೇಕಾದ ಕೆಮರಾ, ಕ್ಯಾಲ್‌ಕುಲೇಟರ್, ಕ್ಯಾಲೆಂಡರ್‌ನಂಥ ಇತರೆ ಇತರೆ ಸಾಮಗ್ರಿ ಮತ್ತು ಜಾವವನ್ನು ಸರಳವಾಗಿ ನಿಭಾಯಿಸಬಹುದು. ಮತ್ತು ಈ ತಂತ್ರಜ್ಞಾನ ಬೇರೆ Operating Systemಗಳಿಗೆ ಹೋಲಿಸಿದರೆ ಇದು ತೀರಾ ಅಗ್ಗ. ಮತ್ತು ಅಲವಡಿಕೆ ಸರಳ. ಅಲ್ಲದೆ ಮತ್ತೂ ಒಂದು ಅನುಕೂಲತೆ ಎಂದರೆ ಇದು Real Time Operating System, ಹಾಗಾಗಿ ಹೆಚ್ಚಿನ ಮೆಮೊರಿ ಅಥವಾ ನಿರ್ಧಿಷ್ಟವಾಗಿ ಹೇಳುವುದಾದರೆ RAMನ ಅಗತ್ಯವಿಲ್ಲ. ಇದು ನಿರ್ಮಾಣ ವೆಚ್ಚವನ್ನು ಗಣನೀಯವಾಗಿ ತಗ್ಗಿಸುತ್ತದೆ.
ಚೀನಾದಿಂದ ಆಮದಾಗುವ ಎಲ್ಲಾ ಫೋನುಗಳೂ ಇದೇ ಸರಕನ್ನು ಹೊತ್ತು ತರುತ್ತವೆ. ಆದರೆ ಇಲ್ಲಿಯೂ ಒಂದು ಚೋದ್ಯವಿದೆ. ಈ ಚಿಪ್‌ಗಳು ಎಲ್ಲಾ ಒಂದೇ ತಂತ್ರಜ್ಞಾನ ಹೊಂದಿದ್ದರೂ ಗುಣಮಟ್ಟದಲ್ಲಿ ತೀವ್ರ ವ್ಯತ್ಯಾಸವಿದೆ. ಹಾಗೆ ನೋಡಿದರೆ ನೋಕಿಯಾದಂಥ ಹಳೇಹುಲಿಗಳ ತಯಾರಿ ಘಟಕದ ಬಹುಪಾಲು ಇರುವುದು ಚೈನಾದಲ್ಲಿ. ಆದರೆ ಅವುಗಳ ಗುಣಮಟ್ಟವನ್ನು ಸ್ವತಃ ನೋಕಿಯಾವೇ ಖಾತ್ರಿಗೊಳಿಸುತ್ತದೆ. ಯಾಕೆಂದರೆ ಚೀನಾದ ತಯಾರಿಕಾ ಘಟಕದ ಸರ್ವ ಉಸ್ತುವಾರಿಯೂ ನೋಕಿಯಾ ಕೈಯಲ್ಲಿಯೇ ಇರುತ್ತದೆ.
ಆದರೆ ಇಲ್ಲಿ ಫೋನ್ ದತ್ತು ಪಡೆಯುವ ಕಂಪೆನಿಗಳು ಎಲ್ಲವೂ ಹಾಗೆಯೇ ಇರಬೇಕೆಂದೇನೂ ಇಲ್ಲ. ಅಲ್ಲಿ ಯಾವುದೋ ಒಂದು ಕಂಪೆನಿ ವಾರಕ್ಕೆ ಹತ್ತು ಸಾವಿರ ಮೊಬೈಲ್ ತಯಾರು ಮಾಡುವಾಗ ಒಟ್ಟಿಗೆ ಇವರದ್ದನ್ನೂ ಮಾಡಿ ಇತ್ತ ತಂದು ಹಾಕುತ್ತವೆ. ಬಹುತೇಕ ಸಂದರ್ಭಗಳಲ್ಲಿ ಈ ಕಂಪೆನಿಗಳಿಗೆ ಸ್ವತಃ ಡಿಸೈನ್ ಎಂಜಿನಿಯರುಗಳಾಗಲೀ, ತಂತ್ರಜ್ಞಾನ ಎಂಜಿನಿಯರುಗಳಾಗಲೀ ಇರುವುದಿಲ್ಲ. ಸಮ್ಮನೆ ಒಂದಷ್ಟು ಮಂದಿ ಮಾರ್ಕೆಟಿಂಗ್‌ನವರು ಕೂತಿರುತ್ತಾರೆ. ಇಂತಹ ನಾಯಿ ಸಂತೆ ಕಂಪೆನಿಗಳು ಅವರ ಎಲ್ಲಾ ಸಾಮರ್ಥ್ಯವನ್ನು ಅಡವಿಡುವುದು ಮಾರಾಟ ಮಾಡಲಷ್ಟೇ ಹೊರತು ತಂತ್ರಜ್ಞಾನ ಅಭಿವೃದ್ಧಿಗಲ್ಲ.
ಚೀನಾದಲ್ಲಿ ಗುತ್ತಿಗೆ ಪಡೆದ ಕಂಪೆನಿಯೇ ಇವರಿಗೆ ಇಂಥಿಂಥಾದ್ದು ನಮ್ಮಲ್ಲಿವೆ ಎಂದು ಪಟ್ಟಿ ನೀಡುತ್ತದೆ. ಅವುಗಳಿಂದ ಕೆಲವು ಮಾಡೆಲ್‌ಗಳನ್ನು ಆರಿಸಿ ಇವರು 'ಇಷ್ಟು ವರ್ಷಕ್ಕೆ' ಎಂದು ಒಂದು ಕರಾರು ಮಾಡಿಕೊಳ್ಳುತ್ತಾರೆ. ಅದರಂತೆ ಚೀನೀಯರು ಕಳಿಸುವ ಮೊಬೈಲುಗಳಿಗೆ ಇವರು ಇಲ್ಲಿ ಏನೇನೋ ಐಲುಗಳನ್ನು ಸೇರಿಸಿ ಜಾಹೀರಾತು ಬರೆಯುವುದು, ಹೊಸ ಹೊಸ ಕೊಡುಗೆಯ ಆಮಿಷ ನೀಡಿ ಇಲ್ಲಿನವರನ್ನು ಮಂಗ ಮಾಡುವ ಕೆಲಸದಲ್ಲಿ ಮಗ್ನರಾಗುತ್ತಾರೆ.

ಇಂತಿ ನಿಮ್ಮ ಪ್ರೀತಿಯ ion:
ಹೀಗೆ ಹೇಳಲು ಒಂದು ಕಾರಣವಿದೆ. ಪತ್ರಿಕೆಗಳಲ್ಲಿ ಬರುವ ಜಾಹೀರಾತುಗಳನ್ನು ನೋಡಿ ನನ್ನ ಸಂಬಂಧಿಯೊಬ್ಬರು ಮಣಿಪಾಲದವರ ಅಯಾನ್ ಫೋನನ್ನು ಕೊಂಡರು. ತೀರಾ ಕಡಿಮೆಯೆನಿಸುವ ದುಡ್ಡಿಗೆ ಎರಡೆರಡು ಸಿಮ್ ಹಾಕುವ, ಕೆಮೆರಾ ಇರುವ, ಹಾಡು ಕೇಳಬಹುದಾದ ಮತ್ತು ಸಿನಿಮಾವೂ ನೋಡಬಹುದಾದ ಫೋನ್ - ಆಹಾ! ಹೊಸತರಲ್ಲಿ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ.
ಆದರೆ ಅವರ ಆನಂದ ಹೆಚ್ಚು ಕಾಲ ಉಳಿಯಲಿಲ್ಲ. ಒಂದೇ ತಿಂಗಳಿಗೆ ಫೋನು ತನ್ನ ಮಾತು ನಿಲ್ಲಿಸಿತು. ಯಾವ ಗುಂಡಿ ಒತ್ತಿದರೂ ಮೌನವೇ ಉತ್ತರ. ಸರಿ. ಹೇಗೂ ವಾರೆಂಟಿ ಇದೆ ಎಂದು ಪುನಃ ಅಂಗಡಿ ಒಯ್ದರು. ಅವರು ಎರಡು ವಾರ ಕಳೆದು ರಿಪೇರಿಯಾಗದ ಈ ಫೋನನ್ನು ಬದಲಿಸಿ ಕೊಟ್ಟರು.
ಪುನಃ ಹೊಚ್ಚ ಹೊಸಾ ಫೋನು. ಆದರೆ ಈ ಆನಂದವೂ ಕ್ಷಣಿಕವೇ ಆಯಿತು. ಹದಿನೈದು ದಿನದಲ್ಲಿ ಮತ್ತೆ ಮೌನ. ಪುನಃ ಅಂಗಡಿಯತ್ತ. ಪುನಃ ಹೊಸ ಫೋನು. ಹೀಗೆ ವಾರೆಂಟಿ ಅವಧಿ ಮುಗಿಯುವುದರ ಒಳಗೆ ಅವರು ನಾಲ್ಕು ಫೋನು ಬದಲಿಸಬೇಕಾಯಿತು.

ಮೂಲ ಕಾರಣ ಇಷ್ಟೆ:
ಎಲ್ಲರೂ ಫೊನಿಗಿಳಿದಾಗ 'ಯಾನ್‌ಲಾ ಉಳ್ಳೆ' ಎಂದು ಮಣಿಪಾಲ ಸಂಸ್ಥೆಯೂ ಅಯಾನ್ ಹೆಸರಲ್ಲಿ ಮೊಬೈಲ್ ವ್ಯಾಪಾರಕ್ಕಿಳಿಯಿತು. ಎಲ್ಲಾ ಫೋನುಗಳೂ ಇದೇ Nucleus RTOS ಹೊಂದಿದ್ದವು. ಅದನ್ನು ಇಟ್ಟುಕೊಂಡು ಕರ್ನಾಟಕದಾದ್ಯಂತ ಇವರ ಮಾರಾಟ. ಜಾಹೀರಾತಿಗೆ ಹೇಗಿದ್ದರೂ ಸಹ ಸಂಸ್ಥೆ ಉದಯವಾಣಿ ಇದ್ದದ್ದರಿಂದ ಅದಕ್ಕೇನೂ ತೊಂದರೆಯಾಗದೆ ಮಾರಾಟ ಜಾಲ ಸುಲಲಿತವಾಯಿತು.
ಆದರೆ ನೈಜ ಸಮಸ್ಯೆ ಆರಂಭವಾದದ್ದು ಫೋನುಗಳು ಗ್ರಾಹಕರ ಕೈ ಸೇರಿದ ನಂತರ. ಮಾತನಾಡಲು ಆರಂಭಿಸಿದ ಕೆಲವೇ ದಿನಗಳಲ್ಲಿ ಫೋನಿಗೆ ಒಂದೊಂದೇ ಗ್ರಹಚಾರ ಬಡಿಯಲು ಶುರುವಾಯಿತು. ಒಂದೊಂದಾಗಿ ಫೋನುಗಳು ವಾರೆಂಟಿ ಅವಧಿ ಮುಗಿಯುವ ಮುನ್ನ ಬಂದು ಬಂದು ಮಣಿಪಾಲದ ಸರ್ವೀಸ್ ಸೆಂಟರಿಗೆ ಬಂದು ಬೀಳತೊಡಗಿತು.
ಆದರೆ ದಿನಕ್ಕೆ ನೂರಾರು ಫೋನುಗಳು ಬಂದು ಬೀಳುವ ಸರ್ವೀಸ್ ಸೆಂಟರಲ್ಲಿ ಕೆಲಸಕ್ಕೆ ಇದ್ದದ್ದು ಕೇವಲ ಹನ್ನೆರಡು ಜನ! ಆ ಒಂದು ಡಜನ್ ಜನ ಪಾಪ ಏನು ಮಾಡಿಯಾರು?
ಆದರೆ ಇವುಗಳ ನಡುವೆಯೇ ಕೆಲವು ಬುದ್ಧಿವಂತ ಕಂಪೆನಿಗಳು ತಲೆ ಓಡಿಸಿ ಗುಣಮಟ್ಟದ ಫೋನುಗಳಿಗೆ ಮಾತ್ರ ಕೈ ಹಾಕಿವೆ. ಮಾರಾಟ ಭರಾಟೆಯೂ ಜೋರಾಗಿಯೇ ಇದೆ. ಆದರೆ ಇವು ಹೆಚ್ಚಿನ ಲಾಭದ ಆಸೆಗೆ ಬಿದ್ದು ಗುಣಮಟ್ಟ ಕಡಿಮೆಗೊಳಿಸಿದರೆ ಮತ್ತೊಮ್ಮೆ ಇತಿಹಾಸ ಪುನರಾವರ್ತನೆಯಾಗುತ್ತದೆ. ಗ್ರಾಹಕನ ಪರಿಸ್ಥಿತಿ ನ್ಯಾಯ ಬೆಲೆ ಅಂಗಡಿಯಿಂದ ಅಕ್ಕಿ ತಂದು ಕಕ್ಕಾಬಿಕ್ಕಿಯಾದಂತೆ ಆಗುತ್ತದೆ.

ಸ್ವಲ್ಪ ಕತ್ತಲು, ಸ್ವಲ್ಪ ಮುಂಗಾರು

ಮತ್ತೆ ಮುಂಗಾರು ಒಂದು ಒಳ್ಳೆಯ ಕಥೆಯಿಟ್ಟು ಮಾಡಿದ ಸಿನಿಮಾ. ನಿರ್ದೇಶಕ ರಾಘವ ದ್ವಾರ್ಕಿ ಉತ್ತಮ ಪ್ರಯೋಗವೊಂದನ್ನು ಮಾಡಿದ್ದಾರೆ.
ಮುಂಬೈನ ಮೀನುಗಾರಿಕಾ ಬಂದರಿನಲ್ಲಿ ಬದುಕು ಕಂಡುಕೊಂಡ ಕನ್ನಡದ ಮಲೆನಾಡ ಮಾಣಿ ನಾಣಿಯ ಸುತ್ತ ಕಥೆ ತೆರೆದುಕೊಳ್ಳುತ್ತದೆ. ಆರಂಭದ ಅರ್ಧ ಗಂಟೆ ನಾಣಿ- ತಾರಾ ನಡುವಿನ ಸುಮಧುರ ಪ್ರೀತಿ, ಸಣ್ಣ ಮುನಿಸು, ಅದರ ಅಗಾಧ ಪರಿಣಾಮಗಳಲ್ಲಿ ಮುಂಗಾರಿನ ಅಭಿಷೇಕ ಕಾಣುತ್ತದೆ.
ದೋಣಿಯ ಮೆಕ್ಯಾನಿಕ್ ನಾಣಿ ಇತರ ಮೀನುಗಾರರೊಂದಿಗೆ ಸಾಗರ ಗರ್ಭದಲ್ಲಿ ಚಂಟಮಾರುತಕ್ಕೆ ಸಿಲುಕುತ್ತಾನೆ. ದಿಕ್ಕಾಪಾಲಾಗಿ ಚೇತರಿಸಿಕೊಳ್ಳುವ ಹೊತ್ತಿಗೆ ಇವರ ಜೀವದಾನಿ ದೋಣಿ ಶತ್ರು ದೇಶದ ಗಡಿಯೊಳಗೆ ಸೇರಿರುತ್ತದೆ. ಎಲ್ಲರೂ ವೈರಿ ದೇಶದಲ್ಲಿ ಖೈದಿಗಳಾಗುತ್ತಾರೆ. ಮುಂದಿನ ಎರಡು ದಶಕ ಅವರದ್ದು ಬದುಕಲ್ಲದ ಬದುಕು.
ಕತ್ತಲ ಕೋಣೆಯಲ್ಲಿ ಕ್ರೌರ್ಯ, ಯಾತನೆ, ವ್ಯರ್ಥ ಕನಸು, ಕಾಡುವ ನೆನಪುಗಳನ್ನು ವ್ಯಕ್ತಪಡಿಸುವ ಪ್ರಯತ್ನ ದ್ವಾರ್ಕಿ ಮಾಡಿದ್ದಾರೆ. ಅಲ್ಲಿ ತುಂಡು ಚಪಾತಿಗೂ ಪರದಾಟ, ಹನಿ ನೀರಿಗೆ ಹಾಹಾಕಾರ, ಬೆಳಕು ದುಸ್ಥರ. ಜೈಲಿನೊಳಗಿನ ಯುದ್ಧ ಖೈದಿಯಾದ ಭಾರತೀಯ ಸೇನಾಧಿಕಾರಿಯ ಪಾತ್ರವಾಗಿ ಅಂಬರೀಷರ ಧ್ವನಿಯಿದೆ. ಮುಖವೇ ತೋರಿಸದೆ ಹಿನ್ನೆಲೆ ಧ್ವನಿ ಮಾತ್ರದಿಂದ ಪಾತ್ರ ಚಿತ್ರಿಸಿದ್ದರಲ್ಲಿ ಹೊಸತನವಿದೆ.
ಆದರೆ ಕಥೆಯಿರುವಷ್ಟು ಚಂದಗೆ ಸಿನಿಮಾ ಕೆತ್ತಲು ದ್ವಾರ್ಕಿ ಸೋತಿದ್ದಾರೆ. ಮೊದಲ ಅರ್ಧ ಗಂಟೆ ಹಾಗೂ ಕೊನೆಯ ಕಾಲು ಗಂಟೆ ಹೊರತು ಇಡೀ ಸಿನಿಮಾ ಒಂದು ಸಾಕ್ಷ್ಯ ಚಿತ್ರದಂತೆ ಭಾಸವಾಗುತ್ತದೆ. ಅಲ್ಲಲ್ಲಿ ಮಣಿರತ್ನಂರ ರೋಜಾ ನೆನಪಾಗುತ್ತದೆಯಾದರೂ ಅಂಥ ನಿರೂಪಣೆ ಇಲ್ಲಿ ಕಾಣುವುದಿಲ್ಲ. ಇಂದಿರಾ, ರಾಜೀವ್ ಗಾಂಧಿ ಹತ್ಯೆಗಳು, ಬಾಬರಿ ಮಸೀದಿ ಧ್ವಂಸ ಪ್ರಕರಣ, ದೆಹಲಿ - ಲಾಹೋರ್ ಬಸ್ ಯಾತ್ರೆ, ಕಾರ್ಗಿಲ್ ಯುದ್ಧಗಳು ಡೈರಿಯ ಪುಟಗಳಲ್ಲಿನ ಒಣ ಇತಿಹಾಸದಂತೆ ತೋರಿಸಿರುವುದು ಪ್ರೇಕ್ಷಕನ ದುರಾದೃಷ್ಟ. ಎಲ್ಲಾ ವಿವರಣೆಗಳು ಬರಿಯ ದಿನಾಂಕ ಮಾತ್ರವಾಗಿದೆ. ನೋಡುವಾಗ ಇತಿಹಾಸ ಪುಸ್ತಕ ಓದಿದ ಅನುಭವ ಆಗುತ್ತದೆಯೇ ಹೊರತು ಅವ್ಯಾವುದರ ಚಿತ್ರಣವೂ ಮನೋಜ್ಞವಾಗಿ ಮೂಡಿಬಂದಿಲ್ಲ.
ಅಲ್ಲದೆ ಪಾಕ್ ಸೈನ್ಯದ ಕೇಂದ್ರ ಕಛೇರಿ ಕರಾಚಿಯಲ್ಲಿ ಇದೆ ಎಂದು ದ್ವಾರ್ಕಿ ಅದೇಕೆ ಬಿಂಬಿಸಿದರೋ ಗೊತ್ತಿಲ್ಲ. ಅಂಬರೀಷ್ ಧ್ವನಿ ನುಡಿಯುವ ದಾರ್ಶನಿಕನಂತಹ ಮಾತುಗಳು ಕೆಲವೊಮ್ಮೆ ಬರಿಯ ಕಮೆಂಟ್ರಿಯಾಗಿದೆ. ಅಲ್ಲಿ ಲಾಜಿಕ್ ಹುಡುಕಿದರೆ ಸಂಭಾಷಣೆಕಾರ ಸೋತದ್ದು ಕಾಣುತ್ತದೆ.
ಸಿನಿಮಾದಲ್ಲಿ ಜೈಲಿನೊಳಗೆ ವಿಚಾರಣೆ ನಡೆಯುವುದು ಪಾಕಿ ಸೈನಿಕರಿಂದ. ಅಲ್ಲಿ ಕರಾವಳಿ ಕಾವಲು ಪಡೆಯ ಅಥವಾ ಐಎಸ್‌ಐಯ ಪ್ರಸ್ತಾಪವೂ ಬರದಿರುವುದು ಪಾಕಿಸ್ಥಾನದ ಬಗ್ಗೆ ತಿಳಿದಿದ್ದವರಿಗೆ ಆಶ್ಚರ್ಯವಾಗಬಹುದು.
ಸುಂದರನಾಥ ಸುವರ್ಣ ಕೆಮರಾದ ಹಿಂದೆ ದುಡಿದದ್ದು ತೆರೆ ಮೇಲೆ ಖಂಡಿತ ಕಾಣುತ್ತದೆ. ಪಾಲ್ ರಾಜ್ ಹಾಡುಗಳಿಗೆ ರಾಗ ಸಂಯೋಜಿಸಿದಷ್ಟೇ ಶ್ರದ್ಧೆಯಿಂದ ಹಿನ್ನೆಲೆ ಸಂಗಿತನ್ನೂ ನೀಡಿದ್ದಾರೆ. ಉಳಿದಂತೆ ಕಿಟ್ಟಿ, ರವಿಶಂಕರ್, ಏಣಗಿ ನಟರಾಜ್ ಮುನಿ, ನೀನಾಸಂ ಅಶ್ವಥ್ ಎಲ್ಲರೂ ತಂತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಕನ್ನಡದಲ್ಲಿ ಮೊದಲ ಗೀತೆ ಹಾಡಿದ ಆಶಾ ಬೋಂಸ್ಲೆಯನ್ನು ಕರೆತಂದದ್ದು ತೀರಾ ತಡವಾಗಿದ್ದರಿಂದ ಅಲ್ಲಿ ಗಾಯಕಿಯ ಹೆಸರಿಗಿರುವ ಚರಿಷ್ಮಾ ಕಂಠದಲ್ಲಿ ಮೂಡಿ ಬಂದಿಲ್ಲ.
ನೈಜ ಘಟನೆ ಆಧರಿಸಿ ಮಾಡಿದ ಚಿತ್ರದ ಶೂಟಿಂಗಿಗೆ ಹೊರಡುವ ಮೊದಲು ಸ್ಕ್ರಿಪ್ಟ್ ಹಂತದಲ್ಲಿ ಒಂದಷ್ಟು ಸೂಕ್ಷ್ಮ ವಿಚಾರಗಳ ಕಡೆಗೆ ಗಮನ ಹರಿಸಿದ್ದಿದ್ದರೆ ಮತ್ತೆ ಮುಂಗಾರು ಅದ್ಭತ ಸಿನಿಮಾವಾಗುತ್ತಿತ್ತು. ಕಡಲ ತೀರದೆ ಕವಿತೆ ಇನ್ನಷ್ಟು ಸುಂದರವಾಗುತ್ತಿತ್ತು.

ಹರಿದ ಕಾಗದ

Jean Cocteau- ಇವನೊಬ್ಬ ಹೆಸರಾಂತ ಫ್ರೆಂಚ್ ಚಿತ್ರ ನಿರ್ದೇಶಕ. ದಶಕಗಳ ಹಿಂದೆ ಈತ ಹೇಳಿದ ಒಂದು ಮಾತು ಇವತ್ತಿಗೂ ಸತ್ಯ ಎಂಬ ಸಂದೇಹ ಹುಟ್ಟುತ್ತದೆ. ಹಾಗೊಂದು ಅನುಮಾನ ಬರಲು ನೀವು ಸಿನಿಮಾ ನಿರ್ದೇಶಕನೇ ಆಗಬೇಕೆಂದೇನೂ ಇಲ್ಲ. ನನ್ನ ಹಾಗೆ ಎಡಗೈಗೆ ಬ್ಯಾಂಡೇಜು ಸುತ್ತಿ ಉಪ್ಪರಿಗೆಯ ಕೋಣೆಯ ಮೂಲೆಯಲ್ಲೊಂದು ಮಂಚ ಹಾಕಿ ಕೈಯಲ್ಲಿ ಪುಸ್ತಕ ಹಿಡಿದು ಕುಳಿತರೂ ಸಾಕು.
ಆತ ಹೇಳಿದ್ದು ಇಷ್ಟೆ. Film will only really become an art when cameras are as cheap as fountain pens and raw film stock is as cheap as paper. ಅಂದ್ರೆ ಮಿಳಿ ಹಾಳೆಯಷ್ಟು ಸಿನಿಮಾದ ರೀಲು ಅಗ್ಗವಾದಾಗ; ಬರೆಯುವ ಪೆನ್ನಿನಷ್ಟು ಕ್ರಯಕ್ಕೆ ಕೆಮರಾ  ಸಿಕ್ಕಾಗ ಸಿನಿಮಾ ನಿಜಕ್ಕೂ ಒಂದು ಕಲೆಯಾಗುತ್ತದೆ. ಯಾಕಂದ್ರೆ ಆಗ ಕೈಯಲ್ಲಿ ಕೋಟಿಗಟ್ಟಲೆ ಕಾಸಿಲ್ಲದಿದ್ದರೂ ಒಂದಷ್ಟು ಬುರುಡೆ ಇದ್ದವರು ಸಿನಿಮಾ ಮಾಡಬಹುದು.
ಇಲ್ಲದೆ ಇದ್ರೆ ಈಗ ಇರುವ ಹಾಗೆ - ಈ ಪಿಚ್ಚರ್ ಬಂದ್ಬಿಟ್ಟು ಫುಲ್ ಡಿಪ್ರೆಂಟು ಸಾರ್. ಒಬ್ಬ ಸ್ಲಂ ಹುಡ್ಗ ಮತ್ತೆ ಒಬ್ಳು ರಿಚ್ ಪ್ಯಾಮಿಲಿ ಹುಡ್ಗಿ. ಇವ್ರಿಬ್ರು ಮಧ್ಯೆ ಅದ್ಹೆಂಗೆ ಲವ್ ಆಗುತ್ತೆ ಅನ್ನೋದೇ ಪಿಚ್ಚರ್ ಸ್ಟೋರಿ. ಇದ್ರಲ್ಲಿ  ಆಕ್ಷನ್ನು, ಕಾಮಿಡಿ, ಮದರ್ ಸೆಂಟಿಮೆಂಟು ಎಲ್ಲಾ ಇದೆ ಸಾರ್. ಕ್ಲೈಮ್ಯಾಕ್ಸ್ ಬಂದ್ಬುಟ್ಟು ಫುಲ್ ಡಿಪ್ರೆಂಟು. ಜೇಮ್ಸ್ ಬಾಂಡ್ ಪಿಚ್ಚರಲ್ಲಿ ಎಂಗೆ ಡಿಪ್ರೆಂಟ್ ಕ್ಲೇಮ್ಯಾಕ್ಸ್ ಬರುತ್ತೋ ಅಂಗೇ ಮಾಡಿದೀವಿ. ಇದುವರ‍್ಗೂ ಕನ್ನಡ್ದಲ್ಲಿ ಇಂಥಾ ಡಿಪ್ರೆಂಟ್ ಪಿಚ್ಚರ್ ಯಾರೂ ಮಾಡಿಲ್ಲ ಸಾ.. ಅಂತ TV9ನಲ್ಲಿ ರಾತ್ರೆ ಎಂಟು ವರೆಗೆ ಒದರ‍್ತಿರ‍್ತಾರೆ ನಮ್ಮ ಪಿಚ್ಚರ್ ಡೈರೆಕ್ಟ್ರು.

ಈಗ ಪೆನ್ನಿನಲ್ಲೂ ಕೆಮೆರಾಗಳು ಬಂದಿವೆ. ಆ ಕೆಮರಾದಲ್ಲಿ ಸಿನಿಮಾ ಮಾಡೋದಕ್ಕೆ ಆಗದೆ ಇರಬಹುದು. ಆದರೆ ಕೆಮರಾದ ಮೂಲಕ ಪ್ರಪಂಚ ನೋಡಿ ಹೊಸ ಆಲೋಚನೆ ಮಾಡುವವನಿಗೆ ಅಷ್ಟು ಸಾಕು. ಆದರೂ ಅಂಥಾ ಜನ ನಮ್ಮ ನಡುವೆ ಬಲು ಅಪರೂಪ.
ಗಮ್ಮತ್ತು ಅದಲ್ಲ. ಸಿನಿಮಾ ಬಗ್ಗೆ ಹೀಗೆ ಹೇಳೋ ಮಾತು ಅದ್ಹೇಗೆ ಬರವಣಿಗೆಗೂ ಸರಿ ಹೊಂದುತ್ತದೆ ನೋಡಿ. ಒಂದಿಪ್ಪತ್ತು ವರ್ಷಕ್ಕೆ ಹಿಂದೆ ಬರೆಯೋದಕ್ಕೆ ಅಂತ ನಮ್ಮಲ್ಲಿ ಇದ್ದ ಸಾಧನ ಪೆನ್ನು, ಪೇಪರು, ಬಿಟ್ಟರೆ ಟೈಪ್ ರೈಟರು. ಆದರೂ ಆ ಕಾಲಕ್ಕೆ ಬರವಣಿಗೆ ದೊಡ್ಡ ಕಷ್ಟ ಅಂತ ಹೆಚ್ಚಿನವರಿಗೆ ಅನಿಸುತ್ತಿರಲಿಲ್ಲ.
ಮೊನ್ನೆ ಮೊನ್ನೆ ಮನೆಯ ಅಟ್ಟದಲ್ಲಿ ನನ್ನ ತಂದೆಯವರು ಧಾರವಾಡದಲ್ಲಿ ಓದುತ್ತಿದ್ದ ಕಾಲಕ್ಕೆ ಅಲ್ಲಿಂದ ಮನೆಗೆ ಬರೆದ ಪತ್ರ ಸಿಕ್ಕಿತು. ರಜೆ ಕಳೆದು ಇತ್ತ ಕಡೆಯಿಂದ ಹೊಟವರು ಕ್ಷೇಮವಾಗಿ ತಲುಪಿದ್ದಾರೆ ಅನ್ನುವುದು ಆ ಕಾಗದದ ವನ್ ಲೈನ್ ಸ್ಟೋರಿ. ನನ್ನ ತಂದೆ ಕಥೆಗಾರರಲ್ಲ - ಕಾದಂಬರಿಕಾರರಲ್ಲ, ಹೇಳಿಕೊಳ್ಳುವಂತಹ ಕವಿಯೂ ಅಲ್ಲ. ಆದರೆ ಆ ಪತ್ರದ ತುಂಬ ತುಂಬಿದ್ದ ಅಕ್ಷರಗಳು ಒಂದು ಸುಂದರ ಕಥೆಯಾಗಿ - ಕವನವಾಗಿ ಎಳೆ ಎಳೆಯಾಗಿ ಬಿಡಿಸಿಕೊಳ್ಳುತ್ತವೆ. ಅಲ್ಲಿ ದೂರ ಪ್ರಯಾಣದ ವರ್ಣನೆಯಿದೆ. ಬಸ್ ಸ್ಟಾಂಡ್ ಹೋಟೆಲ್ಲಿನ ಫಿಲ್ಟರ್ ಕಾಫಿಯ ಘಮವಿದೆ. ಚಾರ್ಮಾಡಿಯ ಸುತ್ತಲಿನ ಚುಮು ಚುಮು ಚಳಿಯಿದೆ. ಬಸ್ಸಿನ ಕಿಟಕಿಯ ವರೆಗೂ ಆವರಿಸಿದ ಮಂಜಿದೆ - ಆ ಇಡೀ ಪತ್ರ ಒಂದು ಪ್ರವಾಸಿ ಲೇಖನ.
ಇದು ನನ್ನ ತಂದೆಯೊಬ್ಬರ ಕಥೆಯಲ್ಲ. ಅಂದಿನ ದಿನಗಳಲ್ಲಿ ದೂರದೂರಿನಲ್ಲಿ ಕಲಿಯುತ್ತಿದ್ದ ಪ್ರತಿಯೊಬ್ಬರ ಕಥೆ. ಕನಿಷ್ಟ ವಾರಕ್ಕೆ ಒಂದು ಪತ್ರವನ್ನಾದರೂ ಅವರು ಬರೆಯುತ್ತಿದ್ದರು. ಇತ್ತ ಊರಲ್ಲಿ ಕುಳಿತವರೂ ಅಷ್ಟೇ. ಬಾಳೆ ಬ್ಯಾರಿಯೊಂದಿಗೆ ನಡೆಸಿದ ವ್ಯಾಪಾರ, ಭಟ್ಟ ಮಾವನ ಮಗನ ನಾಮಕರಣ, ವರ್ಷದ ಮೊದಲ ಅಡಿಕೆ ಕೊಯ್ಲು, ಬುಡಕ್ಕೆ ಹಾಕಿದ ಗೊಬ್ಬರ, ಗೊನೆಗೆ ಬಿಟ್ಟ ಮದ್ದು, ದೀಪಾವಳಿಗೆ ಮನೆಗೆ ಬಂದ ಭಾವ, ಕಾರಣವಿಲ್ಲದೆ ಜಗಳವಾಡಿ ಹೋದ ಮಾವ - ಇವರೆಲ್ಲರನ್ನೂ ಸೇರಿಸಿ ಅಂದದ ಪತ್ರವೊಂದನ್ನು ಬರೆಯುತ್ತಿದ್ದರು.
ಅಂದಿನ ಕಾಲಕ್ಕೆ ಹೋಲಿಸಿದರೆ ಬರವಣಿಗೆಯ ಕ್ರಮದಲ್ಲಿ ಇಂದು ಸಾಕಷ್ಟು ಪರಿವರ್ತನೆಗಳಾಗಿವೆ. ಮೊಳೆಯಚ್ಚು ತಂತ್ರಜ್ಞಾನದಿಂದ ಮುದ್ರಣ ಮಾಧ್ಯಮ ಹೇಗೆ ಇಂದು ಸಂಪೂರ್ಣ ಬದಲಾವಣೆ ಹೊಂದಿದೆಯೋ ಹಾಗೆಯೇ ಬರೆವಣಿಗೆಯಲ್ಲೂ ಸಾಕಷ್ಟು ಹೊಸ ಸಾಧ್ಯತೆಗಳು ಹುಟ್ಟಿಕೊಂಡಿವೆ.
ಕಾಗದ ಪೆನ್ನು ಹಿಡಿದು ಗೀಚಬೇಕಾಗಿಲ್ಲ. ಕೈ ಬರಹದ ಅಂದದ ಬಗ್ಗೆ ತಲೆಕೆಡಿಸಿಕೊಳ್ಳಬೇಕಿಲ್ಲ. ನಮಗೆ ಸರಿ ಹೊಂದುವ ಫಾಂಟನ್ನು ಆರಿಬಹುದು. ಅಕ್ಷರ ತಪ್ಪಾದರೆ ಚಿತ್ತು ಮಾಡಬೇಕಾಗಿಲ್ಲ. ಬ್ಯಾಕ್ ಸ್ಪೇಸ್ ಎಂಬ ಪುಟ್ಟ ಗುಂಡಿ ಅದನ್ನು ಸರಿಮಾಡುತ್ತದೆ. ಇಂಗ್ಲೀಷಾದರಂತೂ ಸ್ಪೆಲ್ಲಿಂಗ್ ತಪ್ಪಾಗುವ ರಗಳೆಯೂ ಇಲ್ಲ. ಟೈಪ್ ಮಾಡುತ್ತಿದ್ದಂತೆಯೇ ತಪ್ಪಾದರೆ ಕೆಂಪು ಗೆರೆಯೊಂದು ಅಡ್ಡ ಬರುತ್ತದೆ. ಬೇಕಿದ್ದರೆ ಬದಲಿ ಪದಗಳನ್ನೂ ಕಂಪ್ಯೂಟರೇ ಸೂಚಿಸುತ್ತದೆ.
ಅಂಗೈಯಲ್ಲಿಯೇ ಮೊಬೈಲೆಂಬ ಮಾಂತ್ರಿಕ ಸಾಧನವಿದೆ. ಅದರಲ್ಲೂ ಮನಸ್ಸಿದ್ದರೆ ಛಂದದ್ದೊಂದು ಸಾಲು ಕೀಲಿಸಿ ಕಳಿಸಬಹುದು. ಬರೆಯಲು ಎಲ್ಲವೂ ಇದೆ - ಅನುಭವ, ಹೊಸ ವಿಷಯ, ಕಾಣುವ ಹೊಸ ಮುಖ, ಬದಲಾಗುವ ಸಂಬಂಧಗಳು - ಎಲ್ಲವೂ ಇದೆ. ಇಲ್ಲದಿರುವುದು ಬರೆಯುವ ಚೈತನ್ಯವಷ್ಟೆ. ‘been 2 blore vit frnd. Wtchd movie. Hd gr8 time. GN’ ಎಂದು 160 character ಗಳ ಒಳಗೆ ನಮ್ಮೆಲ್ಲ ಬರಹ ಹರಿದು ಹೋಗಿದೆ.

ದಿನಕ್ಕೆ ಹತ್ತು ಹುಡುಗಿಯರಿಗೆ ನೂರು ಮೆಸೇಜು ಕಳಿಸುವ ಕಾಲೇಜು ಹುಡುಗನಿಗೆ ಒಂದು ಸುಂದರ ಪ್ರೇಮ ಪತ್ರ ಬರೆಯಲು ಹೇಳಿದರೆ ಆತ ಬೆ.. ಬ್ಬೆ.. ಬ್ಬೆ.. ಒಂದು ವೇಳೆ ಬರೆದರೂ ಅದನ್ನು ಮೇಷ್ಟ್ರು ತಿದ್ದಬೇಕಾದಂಥ ಪರಿಸ್ಥಿತಿ. ಸಾಲಿಗೊಂದು ಅಕ್ಷರ ದೋಷ. ಅದನ್ನೂ ಮೀರಿಸುವ ವ್ಯಾಕರಣ. ಒಂದೇ ಎರಡೇ..? ಬೇಕಿದ್ರೆ ಗೂಗಲ್‌ನಲ್ಲಿ ಜಾಲಾಡಿ ಒಂದ್ಹತ್ತು ಲವ್ ಲೆಟರ್ ಓದಿಯಾದ್ರೂ ನಿನ್ನದೇ ಒಂದು ಬರಿ ಮಹಾರಾಯ ಅಂದ್ರೆ ಅದಕ್ಕೂ ನಾಲ್ಕು ದಿನ ಸಮಯ ಕೇಳ್ತಾನೆ ಫಟಿಂಗ!
ಅದ್ಸರಿ, ನೀವು ನಿಮ್ಮ ಹುಡುಗಿಗೆ ಬರೆದು ಅದೆಷ್ಟು ದಿನ ಆಯ್ತು?

ಕಲಿಗಾಲ ಸ್ವಾಮಿ... ಕಲಿಗಾಲ


ಉಪೇಂದ್ರ ಎಂಬ ಸಿನಿಮಾ ನಿಮಗೆ ನೆನಪಿರಬಹುದು. ಅದರಲ್ಲಿ ಕಥಾ ನಾಯಕ ಉಪೇಂದ್ರ ನಾಯಕಿ ರತಿ(ಧಾಮಿನಿ) ಎದುರು ಒಂದು ಮಾತು ಹೇಳುತ್ತಾನೆ. ದೇಶದಲ್ಲಿ ಅದೆಷ್ಟು ಅಕ್ರಮ ಸಂಬಂಧಗಳಿಲ್ಲ ಹೇಳು.. ಪ್ರತಿ ರೂಮಿನ ಗೋಡೆಗಳಿಗೆ ಮಂಚಗಳಿಗೆ ನೋಡಕೆ ಕಣ್ಣಿದ್ದು ಮಾತಾಡೋಕೆ ಬಾಯಿ ಇದ್ದಿದ್ರೆ ದಿನಕ್ಕೊಂದೊಂದು world war ಆಗೋದು ಪ್ರಪಂಚದಲ್ಲಿ.
            ಮಾತು ಅವತ್ತಿಗೆ ಒಂದು ಸಿನಿಮಾ ಸಂಭಾಷಣೆ ಮತ್ತು ಸಿನಿಮೀಯ ಮಾತು. ಆದರೆ ಇಂದು ಸತ್ಯಕ್ಕೆ ಇದು ಕೊಂಚ ಕೊಂಚವೇ ಸನಿಹ ಬರುತ್ತಿದೆ. ಒಂದು ಕಡೆ ಸ್ವಾಮಿ ನಿತ್ಯಾನಂದ ನಟಿ ರಂಜಿತಾ ಜೊತೆಗೆ ತಾಂತ್ರಿಕ ಧ್ಯಾನ ಮಾಡುತ್ತಿರುವುದನ್ನು ಹಾಗೆಯೇ ಚಿತ್ರೀಕರಿಸಿ ಮಾಧ್ಯಮಗಳಿಗೆ ಸಿಗುವಂತೆ ಮಾಡಿದ್ದಾರೆ. ನೋಡಿ ಸ್ವಾಮಿ ನಾವಿರೋದು ಹೀಗೆ ಎಂದು ನಿತ್ಯಾನಂದ ಬಾಯಿ ಬಿಟ್ಟು ಹೇಳದೇ ಇದ್ದರೂ ಓಹೋ.. ಸ್ವಾಮಿ ಹೀಗೆ ಎಂದು ಜನ ಮಾತಾಡಿಕೊಂಡರು. ಮೊಬೈಲಿನಲ್ಲಿ ನಿತ್ಯಾನಂದನ ಎಸ್ಸೆಮ್ಮೆಸ್ಸುಗಳು ಬಿರುಸಿನ ವೇಗದಲ್ಲಿ ಹರಿದಾಡಲಾರಂಭಿಸಿತು. ಅದನ್ನು ಓದಿ ಓದಿ ಬೇಸತ್ತು ಹೋದೆವು ಎಂದು ಜನರಿಗೆ ಅನಿಸುವ ಹೊತ್ತಿಗೆ ಹರತಾಳು ಹಾಲಪ್ಪನಿಂದ ಹೊಸತೊಂದು ಸಂದೇಶ ಬಂತು.
            ಅಲ್ರೀ ಹೆಂಡತೀನ ಅತ್ಯಾಚಾರ ಮಾಡೋವಾಗ ಯಾರಾದ್ರೂ ಮೊಬೈಲ್ ಹಿಡ್ಕೊಂಡು ರೆಕಾರ್ಡ್ ಮಾಡ್ತಾರೇನ್ರೀ ಎಂದು ಕೆಲವರು ಕೇಳಿದರು. ಅಷ್ಟಾಗುವ ಹೊತ್ತಿಗೆ ಅದು ಅವನ ಹೆಂಡತೀನೇ ಅಲ್ವಂತೆ, ಅವನಿಗೆ ಮೊದಲು ಬೇರೇ ಹೆಣ್ಣಿನ ಜೊತೆ ಮದುವೆ ಆಗಿತ್ತಂತೆ. ಇವಳು ಹೆಂಡತಿ ಅಂತ ಆಗೋದಿಲ್ಲ, ಇದೊಂಥರಾ ಬೇರೆ ಹೆಸರಿನ ವ್ಯವಹಾರ  ಅಂತ ಇನ್ನು ಕೆಲವರು ಮಾತಾಡಲು ಶುರು ಮಾಡಿದರು. ಅದಕ್ಕೆ ಸಂಬಂಧಿಸಿದಂತೆ ಸುದ್ದಿ ವಾಹಿನಿಗಳು ಆಹಾರ ಪೂರೈಕೆ ಮಾಡಿದರು.
            ನಿತ್ಯಾನಂದ, ಹಾಲಪ್ಪ ಪ್ರಕರಣಗಳು ಆಗುವುದಕ್ಕೂ ಮೊದಲು ಆಂಧ್ರ ಪ್ರದೇಶದ ರಾಜ್ಯಪಾಲ ಆಗಿದ್ದ ಎನ್.ಡಿ.ತಿವಾರಿ ಹೈದರಾಬಾದಿನ ರಾಜಭವನದಲ್ಲಿ ಲಲನೆಯರೊಂದಿಗೆ ಹೈದರಾಬಾದ್ ನಿಜಾಮನ ಸ್ಟೈಲಿನಲ್ಲಿ ವಿರಾಜಮಾನರಾಗಿ ರಾಜಯೋಗ ಅನುಭವಿಸುತ್ತಿದ್ದುದನ್ನು ಸಮಸ್ತ ಪ್ರಜೆಗಳೂ ನೋಡಿದ್ದಾರೆ. ನಂತರ ಆಸಾಮಿ ರಾಜೀನಾಮೆ ನೀಡಿ ತಮಗೆ ದಕ್ಕಿದ್ದ ರಾಜಯೋಗವನ್ನು ಅದೇ ಮಂಚದಲ್ಲಿ ಬಿಟ್ಟು ಮನೆಗೆ ತೆರಳಿದರು.
            ಇದು ನಮ್ಮ ಸಮಾಜದಲ್ಲಿ ಗಣ್ಯ ವ್ಯಕ್ತಿಗಳು ಎಂದು ಭಾವಿಸಲಾದ ಕೆಲವು ವ್ಯಕ್ತಿಗಳ ಚಿತ್ರಣ ಮತ್ತು ಚಿತ್ರೀಕರಣ. ಇವುಗಳಲ್ಲಿ ಹೆಚ್ಚಿನವು ಮೊಬೈಲ್‌ನಲ್ಲಿ ದಾಖಲಿಸಿದ ತುಣುಕುಗಳು.
ಅದು ಬಿಡಿ. ಆದರೆ ಮೊಬೈಲ್ ಎಂಬ ಮಾಂತ್ರಿಕ ಬಂದ ಮೇಲೆ ಅದ್ಹೇಗೆ ನಮ್ಮಲ್ಲಿ ಖಾಸಗಿತನ ಎಂಬುದೇ ಇಲ್ಲವಾಗಿ ಹೋಗಿದೆ ನೋಡಿ. ಗೆಳತಿ ಜೊತೆಗೆ ಒಂದರ್ಧ ಗಂಟೆ ಮಾತಾಡೋಣ ಎಂದು ಹೋಟೆಲ್ಲಿಗೆ ಹೋದರೆ ಹನ್ನೆರಡು ವರ್ಷಗಳ ಹಿಂದೆ ತಪ್ಪಿ ಹೋಗಿದ್ದ ಒಬ್ಬ ಗೆಳೆಯ ಫೋನ್ ಮಾಡುತ್ತಾನೆ. ಬಹಳ ವರ್ಷಗಳ ನಂತರ ಮಾತಿಗೆ ಸಿಕ್ಕವನೊಂದಿಗೆ ಒಂದು ಹತ್ತು ನಿಮಿಷವಾದರೂ ಮಾತಾಡದಿದ್ದರೆ ಹೇಗೆ? ಕರಗುತ್ತಿರುವ ಐಸ್‌ಕ್ರೀಂ ಎದುರಿಗಿದ್ದರೂ ದಾಕ್ಷೀಣ್ಯಕ್ಕೆ ನೀವು ಅವನೊಂದಿಗೆ ಮಾತಾನಾಡಿ ಮುಗಿಸುತ್ತೀರಿ.
            ಅಷ್ಟಾಗುವ ಹೊತ್ತಿಗೆ ನಿಮ್ಮ ಗೆಳತಿಯ ಫೋನು ರಿಂಗಿಣಿಸುತ್ತದೆ. ಇನ್ನು ಒಂದು ತಿಂಗಳಲ್ಲಿ ಮದುವೆಯಾಗಲಿರುವ ಆಕೆಯ ಗೆಳತಿ ಸಿರೆ- ಆಭರಣದ ವಿಚಾರವಾಗಿ ಒಂದಿಷ್ಟು ಗಂಭೀರ ವಿಚಾರ ಮಾಡುತ್ತಾಳೆ.
            ಐದು ನಿಮಿಷದ ಬಳಿಕ ನಿಮ್ಮ ಮಾತು ಪುನಃ ಶುರುವಾಗಿರುತ್ತದೆ, ಅಷ್ಟರಲ್ಲಿ ಅವಳ ಅಮ್ಮ ಎಲ್ಲಿದ್ದೀಯ ಎಂದು ಫೋನಾಯಿಸುತ್ತಾರೆ. ಅಲ್ಲಿಗೆ ನಿಮ್ಮ ಅಂದಿನ ಖಾಸಗಿ ಭೇಟಿ ಮುಗಿಯಿತು.
ಒಂದು ವರ್ಷದ ಹಿಂದೆ ಇದೇ ಫೋನಿನಲ್ಲಿ ನೀವುಗಳು ಮಾತಾಡಿ ಮಾತಾಡಿ ಇವತ್ತು ಹೋಟೆಲ್ಲಿಗೆ ಹೋಗುವ ಮಟ್ಟಕ್ಕೆ ಬಂದಿದ್ದೀರಿ, ಆದರೆ ಇವತ್ತು ಇದೇ ಫೋನು ನಿಮ್ಮನ್ನು ದೂರ ತಳ್ಳುತ್ತಿದೆ! ಕಲಿಕಾಲ...
            ಇದೇನೋ ಸಾರ್ವಜನಿಕ ತಾಣವಾಯಿತು. ಆದರೆ ಮೊಬೈಲು ಬೆಡ್‌ರೂಮಿನ ಒಳಕ್ಕೂ ಹೊಕ್ಕಿತು ನೋಡಿ. ನಮ್ಮ ಹೈಸ್ಕೂಲು ಮಕ್ಕಳೂ ಮಕ್ಕಳಾಗೋದು ಹ್ಯಾಗೆ ಎಂಬ ರಹಸ್ಯವನ್ನು ಭೇದಿಸಿ ಬಿಟ್ಟರು. ಉತ್ತರ ಭಾರತದ ಒಂದು ಕಾಲೇಜಿನ ಪಿಯುಸಿ ಹುಡುಗಿ ಅದೇ ಕಾಲೇಜಿನ ಹುಡುಗನೊಂದಿಗೆ ಒಂದಷ್ಟು ಪ್ರೀಯಾಗಿ ಮೂವ್ ಆಗಿರುತ್ತಾಳೆ. ಇದನ್ನು ಫಟಿಂಗ ಹಾಗೇ ಸುಮ್ಮನೆ ರೆಕಾರ್ಡ್ ಮಾಡಿರುತ್ತಾನೆ. ಇದು ಎಲ್ಲೆಲ್ಲೋ ಸಾಗಿ ನಮ್ಮ ಪಕ್ಕದ್ಮನೆ ಹುಡುಗನ ಮೊಬೈಲಿಗೆ ಬಂದು ಸೇರಿರುತ್ತದೆ. ಅಲ್ಲಿಂದ ನಾವೂ ನೀವು ಬ್ಲೂ ಟೂತ್‌ನಿಂದ ಸೆಂಡ್ ಮಾಡಿಕೊಡಿರುತ್ತೇವೆ.
            ಇಷ್ಟೆಲ್ಲಾ ಆದ್ರೂ ನಾವು ಸಾಚಾಗಳು. ಆದ್ರೆ ನಿತ್ಯಾನಂದ, ಹಾಲಪ್ಪ.. ಛೇ.. ಮನುಷ್ಯ ಮರ್ಯಾದಿಯಿಂದ ಬದುಕೋದು ಕಲೀಬೇಕ್ರೀ..

ಆಡು ಆಟ ಆಡು

ಮೊದಲೆಲ್ಲ ಪತ್ರಿಕೆಗಳ ಸಿನಿಮಾ ಪುರವಣಿ ಮಾತ್ರ ಗ್ಲಾಮರಸ್‌ ಆಗಿರುತ್ತಿತ್ತು,. ಈಚೀಚೆಗೆ ಕ್ರೀಡಾ ಪುರವಣಿಗಳೂ ಹಾಗೆ ಆಗುತ್ತಿವೆ. ಕ್ರೀಡೆಯೆಂದರೆ ಕ್ರಿಕೆಟ್ ಮಾತ್ರ ಎಂಬ ಭಾವನೆ ನಮ್ಮಿಂದ ದೂರವಾಗುತ್ತಿದೆ. ಮ್ಯಾಚ್ ಪ್ರಸಾರವಾಗುತ್ತಿದ್ದಾಗ ವಿದ್ಯುತ್ ಕೈ ಕೊಟ್ಟರೆ ಕೂಡಲೆ ರೆಡಿಯೋ ತಿರುಗಿಸಿ ಕಮೆಂಡ್ರಿ ಕೇಳುವು ಹುಚ್ಚು ಮೊಡಲಿನಂತೆ ಈಗ ಇಲ್ಲ. ಇದನ್ನೆಲ್ಲ ಅರಿತೇ ಅದರ ಜನಪ್ರಿಯತೆ ಉಳಿಸಿಕೊಳ್ಳಲು ತುಳು ಯಕ್ಷಗಾನದಂತೆ T20 ಆರಂಭವಾದ್ದು.
ಈಗೀಗ ಸ್ಕ್ವಾಶ್‌ನಂಥ ಅಟಗಳೂ ಹೆಸರೇ ತಿಳಿಯದಷ್ಟು ಅಪರಿಚಿತವಲ್ಲ. ಫಾರ್ಮುಲಾ ವನ್ ಎಂದರೆ ಏನು ಎಂಬುದು ನಮ್ಮ ಯುವ

ಜನಾಂಗಕ್ಕೆ ಗೊತ್ತು. ಅದನ್ನೀಗ "ಕಾರ್ ರೇಸ್" ಎಂದು ಹೇಳುವವರು ಕಡಿಮೆ. ಅದು F1 ಎಂದು ನಿಖರವಾಗಿ ತಿಳಿದಿದೆ. ನಮ್ಮ ಕಾರ್ತಿಕೇಯನ್ F1 ಕಾರ್ ಓಡಿಸಿದ್ದು ನಮ್ಮವರಿಗೆ ಅರಿವಿದೆ. ವಿಜಯ್ ಮಲ್ಯ ಸಾರಥ್ಯದಲ್ಲಿ ಫೋರ್ಸ್ ಇಂಡಿಯಾ ಪ್ವಾಶವಾದ ಮೇಲೆ ಪ್ರಾದೇಶಿಕ ಪತ್ರಿಕೆಗಳೂ ಆ ಕ್ರೀಡೆಯ ಪೋಟೋ ಪ್ರಕಟಿಸುತ್ತಿವೆ.
ರೇಸಿನ ಆರಂಭದಲ್ಲಿ ಕಾರುಗಳ ಪಕ್ಕ ಕೊಡೆ ಹಿಡಿದು ನಿಲ್ಲುವ ಮಾಡೆಲ್‌ಗಳು ಈಗಿನ ಹೊಸ ಮಾಡೆಲ್ ಯುವಕರ ಲ್ಯಾಪ್ಟಾಪುಗಳಲ್ಲಿ ವಾಲ್ ಪೇಪರುಗಳಾಗಿದ್ದಾರೆ. ಯುವಕರು F1ನತ್ತ ವಾಲಿದ್ದಕ್ಕೆ ಇಂಥ ವಾಲ್‌ಪೇಪರುಗಳು ಒಂದು ಸ್ಣ ಸಾಕ್ಷಿ. ಈ ಕಾರಣಕ್ಕಾಗಿ ಇಂಥ ಹಾಲ್‌ಗೆನ್ನೆ ಕನ್ನೆಯರು T20 ಯಲ್ಲೂ ಕಣಿದು ಟಿಕ್ ಟ್ವೆಂಟಿ ಕುಡಿಸುತ್ತಾರೆ.
ಮೆನ್ನೆ ಮೊನ್ನೆ ಕ್ರೀಡಾ ವಿಭಾಗದಲ್ಲಿ ಭೀಕರ ಸುದ್ದಿಗೆ ಗ್ರಾಸವಾದದ್ದು ಗ್ರೀನ್ ಗ್ರಾಸಿನ ಮೇಲೆ ಗಾಲ್ಪ್ ಆಡುವ ಟೈಗರ್ ವೂಡ್ಸ್. ಈ ಪರಾಕ್ರಮಿ ಟೈಗರ್ ಗಾಲ್ಪ್ ಅಂಗಣದ ಆಚೆಯೂ ಗಾಲ್ಪ್ ಆಡಿದ್ದು ಆ ಆಡದ ಗಂಧ ಗಾಳಿ ಇಲ್ಲದವರಿಗೂ ಒಂದಷ್ಟು ಕುತೂಹಲದ ಗಾಳಿ ಬೀಸಿತು. ವೂಡ್ಸಿಗೆ ಹುಲ್ಲು ಹಾಸು ಸಿಕ್ಕರೆ ಆಡುವುದು ಮಾತ್ರವಲ್ಲ, ಮೇಯುವ ಖಯಾಲಿಯೂ ಇದೆ ಎಂದು ತಿಳಿದಾಗ ಜಾಹೀರಾತಿಗಾಗಿ ಗುತ್ತಿಗೆ ಪಡೆದಿದ್ದ ಖಾಸಗಿ ಕಂಪೆನಿಗಳೆಲ್ಲ ಒಂದೊಂದಾಗಿ ಅವನಿಂದ ಜಾರಿಕೊಂಡವು. ಸಾಮಾನ್ಯ ಜನರಿಗೆ ಇದೆಲ್ಲ ಸಿನಿಮಾದಷ್ಟೇ ಆಸಕ್ತಿದಾಯಕ ರಂಜನಾ ಕ್ಷೇತ್ರವಾಯಿತು.
ಕ್ರೀಡಾ ಜಗತ್ತಿನಿಂದ ಬಂದ ಹೊಸ ಸುದ್ದಿಯೆಂದರೆ ಸಾನಿಯಾ ಮಿರ್ಜಾ ಮದುವೆಯ ನಂತರ ಟೆನಿಸ್ ಅಂಗಣದಲ್ಲಿ ಟೆನಿಸ್ ಆಡುವುದಿಲ್ಲ ಎಂದು ಘೋಷಿಸಿದ್ದು.

ಈ ಹೈದರಾಬಾದಿ ಮೂರ‍್ನಾಲ್ಕು ವರ್ಷಗಳ ಹಿಂದೆ ಸೃಷ್ಟಿಸಿದ್ದ ಹವಾ ನೋಡ್ಬೇಕಿತ್ತು. ಕಾಲೇಜು ಮಕ್ಕಳ ನೋಟ್ ಪುಸ್ತಕದ ಮೇಲ್ಕವಚದಲ್ಲೆಲ್ಲ ಬಿಗಿಯಾದ ಮೇಲ್ಕವಚದಲ್ಲಿ ಸಾನಿಯಾ! ಟೆನಿಸ್ ಲಕದಲ್ಲಿ ಮಹೇಶ್ ಭೂಪತಿ - ಲಿಯಾಂಡರ್ ಪೇಸ್ ಒಂದಷ್ಟು ಕೀರ್ತಿ ಗಳಿಸಿದ್ದರೂ ಅವರ‍್ಯಾರೂ ಸಾನಿಯಾಳಂತೆ ಈ ಪರಿ ರಾರಾಜಿಸಿರಲಿಲ್ಲ. ಅಂಗಣದಲ್ಲಿ ರ‍್ಯಾಕೆಟ್ ಹಿಡಿದು ಬೆವರಿಳಿಸುತ್ತ ಆಡುವ ಬೆಡಗಿಯ ಫೋಟೊ ಪ್ರಕಟಿಸಿ ಪತ್ರಿಕೆಗಳು  ಓದುಗರ ಬೆವರಿಳಿಸಿದ್ದರು. ಟೆನಿಸ್ ಕೋರ್ಟಿನ ಉದ್ದ ಅಗಲ ತಿಳಿಯದವರಿಗೂ ಸಾನಿಯಾ ಸೋನಿಯಾಷ್ಟೇ ಪರಿಚಿತಳಾದಳು.
ಅಲ್ಲಿಯವರೆಗೆ ಅಮೆರಿಕಾದ ಸೆರೆನಾ ವಿಲಿಯಮ್ಸ್ ಎಂಬ "ಗಂಡುಗಲಿ ಮಹಿಳೆ" ನಮ್ಮವರಿಗೆ ಹಿಡಿಸಿರಲಿಲ್ಲ. ನಂತರವೂ ಅಷ್ಟೆ, ಮರಿಯಾ ಶೆರಾಪೋವಾ ಕೂಡ ಹಳಿಕೊಳ್ಳುವಷ್ಟು ಆಕರ್ಷಿಸಿರಲಿಲ್ಲ. ಬಿಡಿ, ಭಾರತೀಯ ಯುವಕರ ಟೇಷ್ಟೇ ಅಲ್ಲ ಅಂಥವರು. ಹಾಗಾಗಿಯೇ ಹೈದರಾಬಾದಿ ಮೂಗುತಿ ಸುಂದರಿ ಅಷ್ಟು ಬೇಗ ಪುಸ್ತಕಗಳಿಗೆ ಬೈಂಡುಗಳಾದದ್ದು.
ಇಷ್ಟಾಗುವಷ್ಟರಲ್ಲಿ ಮುಕ್ರಿಯೊಬ್ಬನಿಗೆ ಈ ಮುಸಲ್ಮಾನ ಹುಡುಗಿಯ ಟಿ ಶರ್ಟಿನ ಮೇಲೆ ಕಣ್ಣು ಬಿತ್ತು(!) ಅಲ್ಲಿಂದ ಇವಳ ವಸ್ರ ಸಂಹಿತಯ ವಿರುದ್ಧ ಫತ್ವವೂ ಹೊರಬಿತ್ತು. ಆದರೆ ಯಾವ ಕಾಲಕ್ಕೂ ಬುರ್ಖಾ ಧರಿಸಿ ಈ ಆಟ ಆಟಲು ಸಾಧ್ಯವೇ ಇಲ್ಲವೆಂಬ ಸತ್ಯ ಅರಿತಿದ್ದ ನಮ್ಮ ಯುವಕರು ಮನಃಪೂರ್ವಕ ಆನಂದಪಟ್ಟರು. (ವಿ.ಸೂ: ಇತ್ತೀಚೆಗೆ ಬುರ್ಖಾಕ್ಕೂ ಶೇಪ್ ಕೊಡಲಾಗುತ್ತಿದೆ. ಆದರೂ ಟೂ ಪೀಸ್ ಬುಖಾ ಎಂದರೆ ಅದು ಕೇವಲ ಎಂ.ಎಪ್.ಹುಸೇನ್‌ನಂಥ ಕಲಾಕಾರರ ಕಲ್ಪನೆಯಾದೀತಷ್ಟೆ.) ಮಗಳು ಬಿಗಿಯಾದ ಟಿ ಶರ್ಷ್ಧರಿಸಿ ಆಡುವುದು ಅವಳ ತಂದೆಗೆ ಅಷ್ಟಾಗಿ ಸಮಾಧಾನವೇನೂ ಇಲ್ಲವಂತೆ ಎಂಬ ಸುದ್ದಿಯೂ ಹೊರಬಿತ್ತು. ಆದೆರೆ ಪಾಪದ ಅಪ್ಪನಿಗೆ ತಿಳಿಯದ ಒಂದು ಪರದೆ ಕೆ ಪೀಛೆ ಕಾ ಸಂಗತಿಯೆಂದರೆ, ಅವಳ ಏಕ್‌ದಂ ಜನಪ್ರಿಯತೆಗೆ ಅವಳ ಟೀ ಶರ್ಟೂ ತನ್ನ ಕೈಲಾದ ಕೊಡುಗೆ ನೀಡಿತ್ತು.


ಕಳೆದ ಒಂದೂವರೆ ಎರಡು ವರ್ಷಗಳಿಂದ ಮಾತ್ರ ಸಾನಿಯಾ ಅಷ್ಟೊಂದು ಸುದ್ದಿಯಲ್ಲಿಲ್ಲ. ಅವಳಿನ್ನು ಆಟ ಆಡಿದರೂ ಆಡದಿದ್ದರೂ ಹೆಚ್ಚಿನ ತಲೆಬಿಸಿ ಮಾಡಲು ಯಾವ ಯುವಕನೂ ತಯಾರಿಲ್ಲವೆನ್ನುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ದಶಕಗಳ ಮೊದಲಿದ್ದಂತೆ ಹೇಮಾಮಾಲಿನಿಗೆ ಮಗುವಾಗಿದ್ದಕ್ಕೂ ತಲೆಬಿಸಿ ಮಾಡುವ ಜಾಯಮಾನದವರಲ್ಲ ಇಂದಿನ ಯುವಕರು. ಊರಿಗೊಬ್ಬಳೇ ಸುಧಾರಾಣಿ ಎಂಬ ಹೇಳಿಕೆ ಈ ಕಾಲಕ್ಕೆ ಹೇಳಿ ಮಾಡಿಸಿದ್ದಲ್ಲ. ಮಲ್ಲಿಕಾ ಶೆರಾವತ್ತೇ ನಾಳೆ ಒಂದೆರಡಿಂಚು ದಪ್ಪಗಾದರೆ ಅವಳೂ ಯುವ ಮನಗಳಿಂದ ಔಟ್. ಇಷ್ಟೆಲ್ಲ ಯಾಕೆ, ಕ್ಲಾಸಿನಲ್ಲಿ ಎದುರು ಬೆಂಚಿಲ್ಲಿ ಸದ್ದಿಲ್ಲದೆ ಕೂರುವ ಬಟ್ಟಲು ಕಂಗಳ ಚೆಲುವೆಯ ಮದುವೆಯಂತೆ ಎಂಬ ಬ್ರೇಕಿಂಗ್ ನ್ಯೂಸ್ ಬಂದರೂ ಇವರ ಮನ ಕಲಕುವಷ್ಟು ತಾಕತ್ತು ಆ ಸಿದ್ದಿಗೂ ಇಲ್ಲ. ಇನ್ನು ಜುಜುಬಿ ಸಾನಿಯಾ ಮಿರ್ಜಾ ಯಾವ ಲೆಕ್ಕ..

ಹೊಸ ದಾರಿ. . . .


"ಅಭಿವೃದ್ಧಿಗಾಗಿ ರಸ್ತೆಗಳು", ಬೆಂಗಳೂರಿನಿಂದ ಮಂಗಳೂರು ಕಡೆಗೆ ನೀವು ಮೈಸೂರು ಬಳಸಿ ಬಂದಿದ್ದೀರೆಂದರೆ ಈ ಫಲಕವನ್ನು ನೋಡಿರುತ್ತೀರಿ. ಬೆಂಗಳೂರಿನಿಂದ ಹುಣಸೂರಿನ ವರೆಗೆ ಚತುಷ್ಪತ, ನಂತರ ಕುಶಾಲನಗರದ ವರೆಗೆ ದ್ವಿಪಥ, ಆದರೆ ಕುಶಾಲನಗರದಿಂದ ಮುಂದೆ ಎಲ್ಲವೂ ತಟ ಪಟ. ಕೆಲವು ಕಡೆ ರಸ್ತೆ ರಿಪೇರಿ ಕಾಮಗಾರಿ ನಡೆಯುತ್ತಿದೆ, ಎಚ್ಚರಿಕೆಯಿಂದ ಚಲಿಸಬೇಕು. ಮತ್ತೆ ಕೆಲವು ಕಡೆ ರಿಪೇರಿಯೇ ನಡೆಯುತ್ತಿಲ್ಲ, ಮತ್ತು ಎಷ್ಟೋ ವರ್ಷದಿಂದ ರಿಪೇರಿ ನಡೆದೇ ಇಲ್ಲ. ಅಲ್ಲೂ ಎಚ್ಚರಿಕೆಯಿಂದ ಚಲಿಸಬೇಕು.
ಇನ್ನೇನು ಈ ರಸ್ತೆ ಅಭಿವೃದ್ಧಿ ಆಗಿಯೇ ಬಿಟ್ಟಿತು ಎಂಬ ಕನಸು ಹೊತ್ತು ನಾನೂ ಕಳೆದ ನಾಲ್ಕು ವರ್ಷಗಳಿಂದ ಅಲ್ಲಿ ಸಾಗಿದ್ದೇ ಸಾಗಿದ್ದು. ಉಹುಂ.. ಮೈಗೆ ಒಂದಷ್ಟು ಧೂಳು ಅಂಟಿದೆಯೇ ವಿನಃ ಕಂಡ ಕನಸು ನನಸಾಗಿಯೇ ಇಲ್ಲ. "ನಾನು, ನನ್ನ ಕನಸು" ಎಂದು ನಾನೂ ಒಂದು ಸಿನಿಮಾ ಮಾಡಿದರೆ ಹ್ಯಾಗೆ? ಗಾಂಧಿನಗರಕ್ಕೆ ಹೋಗಿ "ಪಿಚ್ಚರ್ ಫುಲ್ಲು ಔಟ್ ಡೋರೇ ತೆಗ್ದಿದೀವಿ. ಎಡಿಟಿಂಗ್ ಎಲ್ಲಾ ರಾಂ ಗೋಪಾಲ್ ವರ್ಮಾ ಸ್ಟೈಲಲ್ಲಿದೆ. ನಾಲಕ್ ಚೇಸಿಂಗ್ ಸೀನು, ಮೂರ್ ಫೈಟು.." ಎಂದು ನಾನೂ ಮಾತಾಡಬಹುದಿತ್ತು.
ಮೊನ್ನೆ ಮೈಸೂರಿಗೆ ಹೋಗುವಾಗಲೇ ಯಾವುದಾದರೂ ಬೇರೆ ದಾರಿ ಇದೆಯಾ ಎಂದು ಲೆಕ್ಕ ಹಾಕಿದ್ದೆ. ಸಮಯದ ಅಭಾವದಿಂದಾಗಿ ಅನ್ವೇಷಣೆಗೆ ಹೊರಡದೆ ಹಳೆ ಪಾತ್ರೆ ಹಳೆ ಕಬ್ಣ ಎಂದು ಅದರಲ್ಲೇ ಸಾಗಿದೆ. ಆದರೆ ಅಲ್ಲಿಗೆ ಹೋದ ಮೇಲೆ ಒಂದು ಹೊಸ ದಾರಿ (ನನ್ನ ಮಟ್ಟಿಗೆ) ಇರುವ ವಿಚಾರ ತಿಳಿಯಿತು. ಸರಿ ಬರುವಾಗ ಪ್ರಯೋಗಿಸಿಯೇ ಬಿಡೋಣವೆಂದು ತೀರ್ಮಾನಿಸಿದೆ.

ಕುಶಾಲನಗರದ ಕಾವೇರಿ ನಿಸರ್ಗಧಾಮ ಕಳೆದು ಸುಮಾರು ಒಂದು ಕಿಲೋಮೀಟರಿಗೆ ದುಬಾರೆಗೆ ಹೋಗುವ ಮಾರ್ಗ ಎಡಕ್ಕೆ ತಿರುಗುತ್ತದೆ. ನಾಲ್ಕೈದು ಗೂಡಂಗಡಿಯ ಸನಿಹ ಒಂದು ಪುಟ್ಟದಾದ ಹಸಿರು ಫಲಕದಲ್ಲಿ ಆನೆ ಶಿಬಿರದ ಬೋರ್ಡು! ಆ ರಸ್ತೆಗೆ ತಿರುಗಿ ಹತ್ತು ಕಿಮೀ ಸಾಗಿದರೆ ಎಡಕ್ಕೆ ದುಬಾರೆ. ಆ ಒಳದಾರಿ ನೋಡಿದರೆ ಅದು ಆನೆಗೇ ಸೈ, ನಮಗಲ್ಲ ಎಂದು ಅನಿಸುತ್ತದೆ.
ಇದ್ಯಾವುದಕ್ಕೂ ವಿಚಲಿತರಾಗದೆ ನಾವು ಮುಖ್ಯ ರಸ್ತೆಯಲ್ಲಿ ಮುಂದಕ್ಕೆ ಸಾಗಬೇಕು. ಐದು ಕಿಮೀ ಸಾಗಿದಾಗ ಬಲ ಬದಿಗೆ ಒಂದು ಪುಟ್ಟ ರಸ್ತೆ, ಅದರ ಪಕ್ಕದಲ್ಲಿ ಒಂದು ದೊಡ್ಡ ಬೋರ್ಡು. ಈ ರಸ್ತಯೇ ನಮ್ಮನ್ನು ರಾಜ್ಯ ಹೆದ್ದಾರಿ ೮೯ಕ್ಕೆ ಸಂಪರ್ಕಿಸುವುದು. ಹೆಚ್ಚೇನಿಲ್ಲ, ಬರೇ ಎರಡು ಕಿಮೀ ಮಟ್ಟಿಗೆ ಆ ಮಾರ್ಗವನ್ನು ಸಹಿಸಿದರಾಯಿತು. ಹೆದ್ದಾರಿ ಸಿಕ್ಕ ಕೂಡಲೆ ಬಲಕ್ಕೆ ಹೊರಳಬೇಕು.
ಮುಂದಿನ ನಾಲ್ಕನೇ ಕಿ.ಮೀಗೆ ಚೆಟ್ಟಳ್ಳಿ, ಬಲಕ್ಕೆ ತಿರುಗುವ ಶುಂಟಿಕೊಪ್ಪ ಮಾರ್ಗವನ್ನು ಗಮನಿಸದೆ ನೇರ ಮಡಿಕೇರಿಗೆ ಸಾಗಿದರಾಯಿತು. ಕುಶಾಲನಗರ - ಮಡಿಕೇರಿ ರಸ್ತೆಯಷ್ಟು ಹದಗೆಟ್ಟಿಲ್ಲ. ವಾಹನ ದಟ್ಟಣೆಯೂ ಕಮ್ಮಿ. ಈ ಎಲ್ಲಾ ಅಂಶಗಳನ್ನು ಬದಿಗೊತ್ತಿದರೂ ಈ ದಾರಿಗೆ ಇದರದ್ದೇ ಆದ ಸೊಗಸಿಗೆ. ಮದ್ಯಾಹ್ನ ೨ ಗಂಟೆಯಲ್ಲೂ ಬೀಸುವ ತಂಪು ಗಾಳಿ, ಕೀ ಕೊಡುವ ಗೋಡೆ ಗಡಿಯಾರದ ವೈಂಡಿಂಗಿನಂತೆ ಸುರುಳಿ ಸುರುಳಿ ತಿರುವು. ಎಡಕ್ಕೆ ಎತ್ತರದಲ್ಲಿ ಕಾಫಿ ತೋಟ, ಬಲಕ್ಕೆ ಆಳ ಆಳದ ಕಣಿವೆ, ಕಣಿವೆಗಳಲ್ಲಿ ಕಣ್ಣು ಹಾಯಿಸುವಾಗ ಮಂಗಳೂರು ಬೆಂಗಳೂರು ಹಗಲು ರೈಲು ನೆನಪಾದರೆ ಆಕಸ್ಮಿಕವಲ್ಲ.
ಇಲ್ಲಿ ಸಾಗುತ್ತಿದ್ದಾಗ ನನ್ನಷ್ಟೇ ಹೊಸ ಹುರುಪು ನನ್ನ ಬೈಕಿಗೆ. ದಣಿವೇ ಇಲ್ಲದಂತೆ ಡೀಸಿಲ್ ಎಂಜಿನ್ ಹೊತ್ತ ಬುಲೆಟ್ ಬೈಕು

ತಿರುವುಗಳಲ್ಲಿ ಬಾಗುತ್ತ ಮಾಗುತ್ತ ಚಳಿಯನ್ನೂ ನಿಶ್ಶಬ್ದವನ್ನೂ ಏಕಕಾಲಕ್ಕೆ ಸೀಳಿ ಸಾಗುತ್ತಿತ್ತು. ಹೆಚ್ಚೇನೂ ವಾಹನ ಸಂಚಾರವಿಲ್ಲದ ಈ ಮಾರ್ಗದ ಬದಿಯಲ್ಲಿ ಒಮ್ಮೆ ನಿಲ್ಲಿಸಿದಾಗ ಅನುಭವಕ್ಕೆ ಬರುತ್ತಿದ್ದದ್ದು ಚುಮು ಚುಮು ಚಳಿ, ನೀರವ ಮೌನ ಮತ್ತು ಮುದ ನೀಡುವ ಏಕಾಂತ.
ಮನಸು ಹಾಗೇ ಒಮ್ಮೆ ಮೈಸೂರು ಬೆಂಗಳೂರಿನ ಬಿಡುವಿಲ್ಲದ ಹೆದ್ದಾರಿಯನ್ನು ನೆನಪಿಗೆ ತಂದುಕೊಂಡಿತು. ನೀಳವೇಣಿಯ ಬೈತಲೆಯಂತೆ ನೀಟಾದ ಆ ಹೆದ್ದಾರಿಯಲ್ಲಿ ಹೋಗಿದ್ದಾಗ ಬೈಕಿನ ಎಕ್ಸಲೇಟರ್ ಕೇಬಲ್ ತುಂಡಾಗಿತ್ತು. ಸಣ್ಣ ಪುಟ್ಟ ರಿಪೇರಿಗೆ ಬೇಕಾದ ಒಂದಷ್ಟು ಸರಂಜಾಮುಗಳು ಯಾವತ್ತೂ ನನ್ನ ಪ್ರಯಾಣದೊಂದಿಗೆ ಇರುತ್ತದೆ. ತೊಂದರೆಯೇನೂ ಆಗಲಿಲ್ಲ. ಆದರೆ ಆ ಅರ್ಧ ಗಂಟೆ ಹೈವೇ ಬದಿಯಲ್ಲಿ ನಿಲ್ಲಿಸಿ, ಗ್ರೀಸು  ಮೆತ್ತಿದ ಕೈಗಳಲ್ಲಿ ಸ್ಕ್ರೂ ಡ್ರೈವರ್ ಹಿಡಿದು ನಿಂತಿದ್ದರೆ, ರೊಯ್ಯನೆ ಸಾಗುವ ಒಬ್ಬರೂ ಕ್ಯಾರೆ ಅನ್ನಲಿಲ್ಲ. ಆ ಜನಸಾಗರದಲ್ಲಿನ ಏಕಾಂತಕ್ಕಿಂತ ಈ ನಿರ್ಜನ-ನಿಶ್ಶಬ್ದ, ಏಕಾಂತ ಎಷ್ಟೋ ವಾಸಿ.
ನಾವು ಯಾವತ್ತೂ ಹೀಗೆ. ಎಲ್ಲರೂ ಸಾಗಿ ಸಾಗಿ ಸವೆದ ದಾರಿಯನ್ನೇ ಹೆಚ್ಚಾಗಿ ಆಯ್ಕೆ ಮಾಡುತ್ತೇವೆ. ಎಲ್ಲರೂ ಬಿಇ ಮಾಡುವಾಗ ನಾವೂ ಅದಕ್ಕೇ ಅರ್ಜಿ ಹಿಡಿಯುತ್ತೇವೆ. ಅನಿಮೇಶನ್ನಿಗೆ ಒಳ್ಳೆ ಅವಕಾಶವಿದೆಯಂತೆ ಎಂದು ಯಾರೋ ಹೇಳಿದ್ದು ನಂಬಿ ೫೦ ಸಾವಿರ ತೆತ್ತು ಸೇರುತ್ತೇವೆ. ಈಗ ಬಯೋಟೆಕ್ನಾಲಜಿಗೆ ಭಾರೀ ಡಿಮಾಂಡು ಅಂತ ಪಕ್ಕದ ಮನೆಯ ಬ್ಯಾಂಕ್ ನೌಕರ ಹೇಳಿದರೆ ನಮ್ಮದು ಅದಕ್ಕೇ ಜೈ. ನಮ್ಮ ಹೆಚ್ಚಿನ ನಿರ್ಧಾರಗಳು ಇತರರ ಹೇಳಿಕೆ ಮೇಲೆ ಅವಲಂಬಿತ ಹೊರತು ಸ್ವಂತ ವಿವೇಕಕ್ಕೆ ಒಂದಿನಿತೂ ಕೆಲಸ ಕೊಡುವುದಿಲ್ಲ. ಸುಮ್ನೆ ರಿಸ್ಕ್ ಯಾಕೆ...

ಆದರೆ ರಿಸ್ಕು ಎಲ್ಲದರಲ್ಲೂ ಇದೆ. ತೋಟಕ್ಕೆ ಹೋಗುವುದೂ ಒಂದು ರೀತಿ ರಿಸ್ಕೇ. ತಲೆಗೆ ತೆಂಗಿನಕಾಯಿ ಬಿದ್ದರೆ? ಬಿಸಿನೆಸ್ಸು ರಿಸ್ಕು, ಲಾಸಾದರೆ? ರಿಸ್ಕು ಯಾವುದರಲ್ಲಿಲ್ಲ ಹೇಳಿ. ವ್ಯಾಪಾರ ಮಾಡಿ, ಡ್ರೈವ್ ಮಾಡಿ, ಕೃಷಿ ಮಾಡಿ... ಬೇಡ, ಕೊನೆಗೆ ರೊಮ್ಯಾನ್ಸ್ ಮಾಡಿದ್ರೂ ರಿಸ್ಕಿಲ್ವ ಹೇಳಿ...!

ಸರಕಾರದ ಕೆಲಸ ಯಾರ ಕೆಲಸ...?


ಅವನಿಗೊಬ್ಬಳು ಚಂದದ ಹೆಂಡತಿ. ಗಂಡ ಹೆಂಡಿರ ನಡುವೆ ಜಗಳ-ಮುನಿಸು ಏನೂ ಇರಲಿಲ್ಲ. ನೋಡುಗರ ಕಣ್ಣಿಗೆ ಅವರದ್ದು ಒಳ್ಳೆಯ ದಾಂಪತ್ಯ. ಮದುವೆಯಾಗಿ ಎಂಟು ವರ್ಷಗಳಾಗಿತ್ತು, ಆದರೆ ಮನೆಯಲ್ಲಿ ಮಕ್ಕಳ ದನಿಯಿಲ್ಲ.
ನೆರೆಹೊರೆಯವರಿಗೆ ಒಳಗಿನ ವಿಚಾರ ಏನೆಂದು ತಿಳಿದಿರಲಿಲ್ಲ. ಮಕ್ಕಳಿಲ್ಲದಿದ್ದರೆ ಏನು, ಅವನು ದುಬೈನಲ್ಲಿ ಬೇಕಾದಷ್ಟು ದಿರಂ ದುಡಿಯುತ್ತಿದ್ದ. ಮನೆಯಲ್ಲಿ ಐಶಾರಾಮಿ ವಸ್ತುಗಳಿಗೆ ಕೊರತೆಯಿರಲಿಲ್ಲ.
ಇಂತಿದ್ದಾಗ ಪಕ್ಕದ ಮನೆಗೆ ಒಬ್ಬ ಯುವಕನ ಆಗಮನವಾಗುತ್ತದೆ. ದುಬೈ ಬಾಬುವಿನ ಹೆಂಡತಿಯೊಂದಿಗೆ ಸ್ನೇಹ ಸಂಪಾದಿಸುತ್ತಾನೆ. ಮೊದಲು ಹಾಯ್-ಬಾಯ್‌ಗೆ ಮಾತ್ರ ಸೀಮಿತವಾಗಿದ್ದ ಸ್ನೇಹ ಕಾಲ ಸರಿದಂತೆ, ಹೋಗಿ ಬರುವ ಮಟ್ಟಕ್ಕೆ ಬರುತ್ತದೆ. ಕೊನೆ ಕೊನೆಗೆ ಇವಳ ಇಷ್ಟಾರ್ಥಗಳನ್ನೂ ಯುವಕ ನೋಡಿಕೊಳ್ಳುತ್ತಾನೆ. ಹೀಗಿದ್ದರೂ ದೂರದಲ್ಲಿದ್ದ ದುಬೈ ಬಾಬುವಿಗೆ ಇದ್ಯಾವುದರ ಸುಳಿವೂ ಸಿಗಲಿಲ್ಲ.
ಒಮ್ಮೆ ವಾರ್ಷಿಕ ಭೇಟಿಗೆ ಊರಿಗೆ ಬಂದ ಅವನು ಒಂದು ತಿಂಗಳಿದ್ದು ಮರಳಿದ. ಮರಳಿದ ಮೂರು ತಿಂಗಳ ನಂತರ ಹೆಂಡತಿ ತಾನು ಗರ್ಭಿಣಿಯಾದ ವಿಚಾರವನ್ನು ಇಂಟರ್‌ನ್ಯಾಶನಲ್ ಕರೆ ಮೂಲಕ ತಿಳಿಸಿದಳು. ಕೆಲ ಸಮಯದ ಬಳಿಕ ಒಂದು ಮುದ್ದಾದ ಮಗುವಿಗೆ ಜನ್ಮವಿತ್ತಳು.
ಆದರೆ ಸೂಕ್ಷ್ಮವಾಗಿ ಗಮನಿಸಿ ತಾಳೆ ಹಾಕಿ ನೋಡಿದಾಗ ದುಬೈ ಬಾಬು ಊರಿಂದ ಮರಳಿದ ದಿನಕ್ಕೂ ಈ ಮಹಾತಾಯಿ

ಹೆತ್ತ.ದಿನಕ್ಕೂ ಹತ್ತು ತಿಂಗಳ ಅಂತರವಿತ್ತು! ಪಾಪದ ದುಬೈ ಬಾಬು ಇದರ ಪರಿವೆ ಇಲ್ಲದೆ ಅಂತೂ ಆ ಖುದಾ, ದೇವ್ರು ಕಣ್ ಬಿಟ್ಟ. ನಂ ದುಖಾನ್‌ಗೂ ಏಕ್ ಬಚ್ಚಾ ಆಗಯಾ ಎಂದು ಬಿಚ್ಚು ಮನಸ್ಸಿನಿಂದ ಸಂತಸಪಟ್ಟ. ಇದೆಲ್ಲವನ್ನೂ ಗಮನಿಸುತ್ತಿದ್ದ ದೇವರು ಪಕ್ಕದ ಮನೆಯಲ್ಲಿ ಹುಳ್ಳಗೆ ನಕ್ಕ!
ಇದೊಂದು ಕತೆ. ನನ್ನ ಮಿತ್ರ ರಾಮಮೂರ್ತಿ ಹೇಳಿದ್ದು. ಎಲ್ಲವನ್ನೂ ದೇವರೇ ನೋಡಿಕೊಳ್ಳುತ್ತಾನೆ ಎಂದು ನಾವು ಕರ್ಮಣ್ಯೇ ವಾಧಿಕಾರಸ್ತೆ ಮಾಡದಿದ್ದರೆ ಏನಾಗುತ್ತದೆ ಎನ್ನುವದಕ್ಕೆ ದೃಷ್ಟಾಂತವಾಗಿ ಈ ಕಥೆಯನ್ನು ತನ್ನ ಎಂದಿನ ತುಂಟತನದೊಂದಿಗೆ ಹೇಳಿದ್ದ. ಈ ಕಥೆ ಮೊನ್ನೆ ಹಿರಿಯ ಸ್ವಾತಂತ್ರ ಹೋರಾಟಗಾರ ದೊರೆಸ್ವಾಮಿಯವರು ವಿಧಾನ ಸೌಧದ ಬಗ್ಗೆ ಹೇಳುತ್ತಿದ್ದಾಗ ಪುನಃ ನೆನಪಾಯಿತು.
ವಿಧಾನ ಸೌಧದ ಹೆಬ್ಬಾಗಿಲ ಮೇಲ್ಭಾಗದಲ್ಲಿ ಸರಕಾರದ ಕೆಲಸ ದೇವರ ಕೆಲಸ ಎಂದು ದಪ್ಪ ಅಕ್ಷರಗಳಲ್ಲಿ ಬರೆದಿದೆಯಲ್ಲ. ನೀವೂ ನೋಡಿರುತ್ತೀರಿ.

ಆದರೆ ಸರಕಾರದ ಕೆಲಸ ಮಾಡುವವರು ಹಾಗೆ ಮಾಡುತ್ತಿದ್ದಾರಾ ಎಂದು ನಿಮಗೆ ಅನುಮಾನ ಕಾಡಬಹುದು. ರಾಜಕಾರಣಿಗಳಲ್ಲಿ ಬಹುತೇಕರು ಲಜ್ಜೆಗೆಟ್ಟಿದ್ದಾರೆ. ಹೆಚ್ಚಿನ ಸರಕಾರಿ ಕಚೇರಿಗಳಲ್ಲಿ ನಿಮ್ಮ ಕೆಲಸ ಆಗಬೇಕಾದರೆ ಕಿರ್ಚಿಯಲ್ಲಿರುವವರಿಗೆ ಟೀ ಕುಡಿಯಲು ಒಂಸ್ವಲ್ಪ ಕಾಸ್ ಕೊಡ್ಬೇಕು. ಕೆಲವು ಅಧಿಕಾರಿಗಳು ಟೀ ಕುಡಿಯುವ ಪರಿ ನೋಡಿ ಸಾಮಾನ್ಯರು ಕಂಗೆಟ್ಟಿದ್ದಾರೆ.
ಹೀಗೆಲ್ಲಾ ಯಾಕೆ ಆಗ್ತಿದೆ ಗೊತ್ತಾ?
ಸರಕಾರಿ ಕೆಲಸ ದೇವರ ಕೆಲಸ ಎಂಬುದು ಇಂಥವರಿಗೆ ಮನವರಿಕೆಯಾಗಿದೆ. ಹಾಗಾಗಿ ಸರಕಾರಿ ಕೆಸ ನಮ್ಮದಲ್ಲ, ಅದು ದೇವರದ್ದು. ಅದನ್ನು ಅವನು ನೋಡಿಕೊಳ್ಳುತ್ತನೆ. ನಾವು ಒಂದಷ್ಡು ಟೀ ಕುಡಿಯೋಣ ಎಂಬ ನೀತಿ ಇವರದ್ದು. ಈ ಕಾರಣಕ್ಕಾಗಿಯೇ ಹಿಂದೆಮ್ಮ ವೀರೇಂದ್ರ ಪಾಟೀಲರು ಮುಖ್ಯಮಂತ್ರಿಯಾಗಿದ್ದಾಗ ಆ ಬರಹವನ್ನು ವಿಧಾನಸೌಧದಿಂದ ಅಳಿಸಿ ಹಾಕಿಸಿದ್ದರು ಎಂದು ದೊರೆಸ್ವಾಮಿಯವರು ನೆನೆಯುತ್ತಾರೆ. ಹಾಗೆ ಪಾಟೀಲರು ತೆಗೆಸಿದ್ದುದನ್ನು ಗುಂಡೂರಾಯರು ಸೀಟಿಗೆ ಬಂದಾಗ ಪುನಃ ಬರೆಸಿದರು.

                                                                       ವೀರೇಂದ್ರ ಪಾಟೀಲ್‌



                                                                       ಗುಂಡೂರಾವ್‌
ಹೌದೂ... ಇದನ್ನೆಲ್ಲ ಕಟ್ಕೊಂಡು ನಮ್ಗೇನಾಗ್ಬೇಕು? ಸರಕಾರ ಏನ್ ಬೇಕಾದ್ರೂ ಮಾಡ್ಕೊಳ್ಲಿ. ನಮಗ್ಯಾಕೆ, ನಾವ್ ಯಾಕೆ ತಲೆ ಕೆಡಿಸ್ಕೋಬೇಕು? ದೇವ್ರಿದ್ದಾನೆ, ಎಲ್ಲಾ ನೋಡ್ಕೋತಾನೆ ಬಿಡಿ..!